ರಾಜಕೀಯ

ದಲಿತ ಸಿಎಂ ವಾದ: ಸಿದ್ದರಾಮಯ್ಯ ಹೊರತಲ್ಲ, ಡಿಕೆಶಿಯೂ ಅಪವಾದವಲ್ಲ; ಅಧಿಕಾರಕ್ಕಾಗಿ ಓಲೈಕೆ ರಾಗವಷ್ಟೇ!

Shilpa D

ಬೆಂಗಳೂರು: ದಲಿತ‌ ಮುಖ್ಯಮಂತ್ರಿ ವಾದ ತೀವ್ರಗೊಂಡಿದ್ದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಸೌಜನ್ಯಕ್ಕೂ ಬಾಯಿ ತೆರೆಯಲಿಲ್ಲ. ಸಂಪುಟದಿಂದ ಸಿದ್ದರಾಮಯ್ಯ‌‌ ನಿಮ್ಮನ್ನು‌ ಕಿತ್ತೊಗೆಯುತ್ತಿದ್ದರು ಎಂಬ ಭಯ ಕಾಡುತ್ತಿತ್ತೇ ಡಿಕೆಶಿ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮೂಲ‌‌ ಕಾಂಗ್ರೆಸ್ಸಿಗರೇ ಎತ್ತಿದ್ದ ಈ ವಾದಕ್ಕೆ ಡಿಕೆಶಿ ಬೆಂಬಲ ನೀಡದೇ ಇದ್ದಿದ್ದೇಕೆ? ಡಿಕೆಶಿಯವರೇ ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಆದರೆ ಈ ನೀವು ಈ ಪ್ರಶ್ನೆ ಕೇಳಲು ಅರ್ಹರಲ್ಲ, ಏಕೆಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುನ್ನೆಲೆಗೆ ಬಂದ ದಲಿತ ಸಿಎಂ ವಿಚಾರದಲ್ಲಿ ಸರ್ವಾಂಗವನ್ನೂ ಸ್ತಬ್ಧಗೊಳಿಸಿಕೊಂಡಿದ್ದಿರಲ್ಲವೇ?

ದಲಿತರು ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಅಕಾಲದಲ್ಲಿ ವಾದ ಮಾಡುವ ಕಾಂಗ್ರೆಸ್‌ ನಾಯಕರಿಗೆ ಅಧಿಕಾರದಲ್ಲಿ ಇದ್ದಾಗ ದಲಿತರ ಮೇಲಿನ ಕಾಳಜಿ‌ ಮರೆತು ಹೋಗುತ್ತದೆ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ, ಡಿಕೆಶಿಯೂ ಅಪವಾದವಲ್ಲ. ಅಧಿಕಾರಕ್ಕಾಗಿ ಓಲೈಕೆ ರಾಗವಷ್ಟೇ!

ಡಿಕೆಶಿ ಅವರೇ, ನಿಮಗೆ ನಿಜಕ್ಕೂ‌ ದಲಿತರ ಮೇಲೆ ಕಾಳಜಿಯಿದ್ದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರನ್ನೇ ಸಿಎಂ‌ ಮಾಡುತ್ತೇವೆ ಎಂದು ಘೋಷಿಸಿ. ಆಷಾಢಭೂತಿತನದ ಪ್ರದರ್ಶನವೇಕೆ? ಕೆಪಿಸಿಸಿ ಅಧ್ಯಕ್ಷರು ದಲಿತರನ್ನು ಸಿಎಂ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಿದ್ದರಾಮಯ್ಯ ಅವರೇ ದಲಿತರನ್ನು ಸಿಎಂ ಮಾಡುವ ಬದ್ಧತೆ ನಿಜಕ್ಕೂ ಕಾಂಗ್ರೆಸ್‌ ಪಕ್ಷಕ್ಕಿದೆಯೇ?ಎಂದು ಬಿಜೆಪಿ ತಿರುಗೇಟು ನೀಡಿದೆ.

SCROLL FOR NEXT