ರಾಜಕೀಯ

ಸಿದ್ದರಾಮಯ್ಯ, ಡಿಕೆಶಿ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ: ಬಿಎಸ್.ಯಡಿಯೂರಪ್ಪ

Manjula VN

ಉಡುಪಿ: ಕಾಂಗ್ರೆಸ್ ನಲ್ಲಿ ಒಂದಿಬ್ಬರು ತಾವೇ ಮುಂದಿನ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಬಿಜೆಪಿಯ ಜನಸಂಕಲ್ಪ ಸಮಾವೇಶಕ್ಕೆ ಸೇರುತ್ತಿರುವ ಜನರ ಸಂಖ್ಯೆ ನೋಡಿದಾಗ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಆದ್ದರಿಂದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗುವ ಭ್ರಮೆ ಬಿಟ್ಟು, ವಾಸ್ತವವನ್ನು ತಿಳಿದುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿದರು.

ಸೋಮವಾರ ಇಲ್ಲಿನ ಕಾಪುವಿನಲ್ಲಿ ಬಿಜೆಪಿಯ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಚಾಮರಾಜನಗರದಿಂದ. ಬೊಮ್ಮಾಯಿ ಉತ್ತರ ಕರ್ನಾಟಕದಿಂದ ಪ್ರವಾಸ ಮಾಡಿದ್ದೇವೆ. ರಾಜ್ಯದಲ್ಲಿ 140ಕ್ಕೂ ಹೆಚ್ಚು ಸೀಟು ಗೆದ್ದು ಪ್ರಧಾನಿ  ಮೋದಿಯವರಿಗೆ ಗೌರವ ತಂದು ಕೊಡುವುದೇ ನಮ್ಮ ಗುರಿ ಎಂದು ಹೇಳಿದರು.

ನಾನು ರಾಹುಲ್ ಗಾಂಧಿಯವರನ್ನು ಮೋದಿ ಎದುರು ಬಚ್ಚಾ ಎಂದಾಗ ನನ್ನನ್ನು ಟೀಕೆ ಮಾಡಿದರು. ಆದರೆ, ನಾನು ನನ್ನ ಪ್ರಾಮಾಣಿಕ ಅನಿಸಿಕೆ ಹೇಳಿದ್ದೇನೆ. ರಾಹುಲ್ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತದೆ. ಕೊಳ್ಳೇಗಾಲ ಪುರಸಭೆ, ವಿಜಾಪುರ ನಗರಪಾಲಿಕೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.

ನವೆಂಬರ್ 11 ರಂದು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕಾಗಿ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಕಾರ್ಯಕ್ರಮಕ್ಕೆ 3-4 ಲಕ್ಷ ಜನರನ್ನು ಕರೆತಂದು ಕರ್ನಾಟಕದಲ್ಲಿ ಪಕ್ಷದ ಶಕ್ತಿಯನ್ನು ಪ್ರಧಾನಿಗೆ ತೋರಿಸಲು ಪಕ್ಷದ ಕಾರ್ಯಕರ್ತರು ನಿರ್ಧರಿಸಿದ್ದಾರೆ ಎಂದರು.

SCROLL FOR NEXT