ರಾಜಕೀಯ

ದೊಡ್ಡಗೌಡರ ಸಂಧಾನ ಯಶಸ್ವಿ; ದಯವಿಟ್ಟು ಕ್ಷಮಿಸಿ, ನಾನು ಜೆಡಿಎಸ್ ಬಿಡಲ್ಲ ಎಂದ ಜಿಟಿ ದೇವೇಗೌಡ

Lingaraj Badiger

ಮೈಸೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಮತ್ತು ತಮ್ಮ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರ ನಡುವಿನ ವಿರಸವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಅವರ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದ, ಮತ್ತು ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿದ್ದ ಜಿಟಿ ದೇವೇಗೌಡ ಅವರು ಗುರುವಾರ ದಯವಿಟ್ಟು ಕ್ಷಮಿಸಿ, ನಾನು ಜೆಡಿಎಸ್ ಬಿಡಲ್ಲ ಎಂದು ಹೇಳುವ ಮೂಲಕ ತಾವು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಜೆಡಿಎಸ್ ಆಯೋಜಿಸಿದ್ದ ಪಂಚರತ್ನ ಕಾರ್ಯಾಗಾರದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಇಂದು ನಗರದ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ಅವರ ನಿವಾಸಕ್ಕೆ ಅಚ್ಚರಿ ಭೇಟಿ ನೀಡಿದರು. ಈ ಮೂಲಕ ಜಿಟಿಡಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ದೇವೇಗೌಡರು ತಮ್ಮ ಮನೆಗೆ ಆಗಮಿಸಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ ಅವರು, ದಯವಿಟ್ಟು ನನ್ನ ಕ್ಷಮಿಸಿ. ಜೆಡಿಎಸ್​ ಬಿಟ್ಟು ಹೋಗಲ್ಲ. ಎಲ್ಲ ಪಕ್ಷದವರೂ ನನ್ನನ್ನ ಕರೆದಿದ್ದಾರೆ, ಕಾಂಗ್ರೆಸ್​ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದು ಹೇಳಿದ್ದಾರೆ. ಆದರೆ ನಾವು ಜೆಡಿಎಸ್​ ಪಕ್ಷದಿಂದ ಬೆಳೆದಿದ್ದೇವೆ. ಜೆಡಿಎಸ್​ ಪಕ್ಷವನ್ನ ಕಟ್ಟುವುದೇ ನಮ್ಮ ಗುರಿ ಎಂದ ಸ್ಪಷ್ಟಪಡಿಸಿದರು. 

ಈ ಮೂಲಕ ಕಾಂಗ್ರೆಸ್, ಬಿಜೆಪಿ ಸೇರುವ ವದಂತಿಗಳಿಗೆ ತೆರೆ ಎಳೆದರು. ಅಲ್ಲದೇ ನಮ್ಮ ಪಕ್ಷಕ್ಕೆ ಬರ್ತಾರೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರೀ ನಿರಾಸೆಯಾಗಿದೆ.

SCROLL FOR NEXT