ಬೆಂಗಳೂರು: ನಿನ್ನೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿಯವರು ಬಹಳ ವೀರಾವೇಶದಿಂದ ಭಾಷಣ ಮಾಡಿದ್ದಾರೆ. ಅವರು ಭಾಷಣ ಶುರುಮಾಡಿದಾಗಲೇ ಖುರ್ಚಿಗಳೆಲ್ಲ ಖಾಲಿಯಾಗಿದ್ದವು, ಜನರೆಲ್ಲ ಎದ್ದುಹೋಗಿಬಿಟ್ಟಿದ್ದರು. ಅಲ್ಲೇ ಇವರ ತಾಕತ್ತು, ಧಮ್ಮು ತೋರಿಸಲಿಕ್ಕಾಗಲಿಲ್ಲ, ಇನ್ನು ಚುನಾವಣೆಯಲ್ಲಿ ತೋರಿಸುತ್ತಾರೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಿಗೆ ತಾಕತ್ತು, ಧಮ್ಮು ಇದೆ ಅಂತ ಮುಂದಿನ ವರ್ಷ 2023ರಲ್ಲಿ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಇವರ ಧಮ್ಮು ಚುನಾವಣೆಯಲ್ಲಿ ಗೊತ್ತಾಗುತ್ತದೆ. ನನ್ನ ಅಧಿಕಾರವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಧಮ್ಕಿ ಹಾಕುವ ಬದಲು ಧಮ್ ಇದ್ದರೆ ಮೊದಲು ಆ ಕೆಲಸ ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ. ನಮ್ಮ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೊದಲು ನಿಮ್ಮ ನಾಯಕರುಗಳ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಾಲು ಸಾಲು ಹಗರಣಗಳನ್ನು ಇತ್ಯರ್ಥ ಮಾಡಿಕೊಂಡು ಬನ್ನಿ. ನೀವು ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಎಂದಿದ್ದಾರೆ.
ಇದನ್ನೂ ಓದಿ: ತಾಕತ್ತಿದ್ರೆ, ಧಮ್ಮಿದ್ರೆ ತಡೆಯುವ ಪ್ರಯತ್ನ ಮಾಡಿ': ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಆವೇಶಭರಿತ ಮಾತು
ನಿನ್ನೆ ಸಮಾವೇಶದಲ್ಲಿ ನಾಯಕರೆಲ್ಲರೂ ಬಹಳ ಆವೇಶಭರಿತರಾಗಿ ಮಾತನಾಡಿದ್ದಾರೆ, 2023ರಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಯಡಿಯೂರಪ್ಪನವರು ಹೇಳುತ್ತಾರೆ, ಅವರ ಜೇಬಿನಿಂದಲೇ ವೋಟು ಕೊಡುವುದು, ಜನ ತೀರ್ಮಾನ ಮಾಡುವುದು. ಜನರ ಮುಂದೆ ಹೋಗೋಣ, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ, ಜನರು ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಜನ ಇಂದು ನೆಮ್ಮದಿಯಾಗಿಲ್ಲ. ಬೇಜವಾಬ್ದಾರಿಯ ಬಿಜೆಪಿ ಸರ್ಕಾರವನ್ನು ಜನರು ಮುಂದಿನ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದರು.