ರಾಜಕೀಯ

ಸೋನಿಯಾ, ರಾಹುಲ್ ಗಾಂಧಿ ಮೆಚ್ಚಿಸಲು 'ಮತಾಂತರ ತಡೆ ಮಸೂದೆ'ಗೆ ಕಾಂಗ್ರೆಸ್ ವಿರೋಧ: ಕೆಎಸ್ ಈಶ್ವರಪ್ಪ

Srinivasamurthy VN

ಮೈಸೂರು: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು 'ಮತಾಂತರ ತಡೆ ಮಸೂದೆ'ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಸಾಮಾನ್ಯವಾಗಿ ಮತಾಂತರ ವಿರೋಧಿ ವಿಧೇಯಕ ಎಂದು ಕರೆಯಲ್ಪಡುವ ಕರ್ನಾಟಕ ಧರ್ಮ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಮಸೂದೆ-2022 ರ ಪ್ರತಿಯನ್ನು ಗುರುವಾರ ಪರಿಷತ್ತಿನಲ್ಲಿ ಹರಿದು ಹಾಕಿದ್ದಕ್ಕಾಗಿ ಬಿಜೆಪಿಯ ಹಿರಿಯ ಶಾಸಕ ಕೆಎಸ್ ಈಶ್ವರಪ್ಪ ಶುಕ್ರವಾರ ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಮಸೂದೆಯ ಅಂಗೀಕಾರವನ್ನು ಐತಿಹಾಸಿಕ ಎಂದು ಬಣ್ಣಿಸಿದ ಮಾಜಿ ಸಚಿವ ಈಶ್ವರುಪ್ಪ, ಈ ಕ್ರಮವು ಬಲವಂತದ ಮತಾಂತರಗಳನ್ನು ಮತ್ತು ನಿರ್ದಿಷ್ಟ ಧರ್ಮದ ಕಡೆಗೆ ಜನರನ್ನು ಆಕರ್ಷಿಸುವುದನ್ನು ಕೊನೆಗೊಳಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕೆಲವು ಕಾಂಗ್ರೆಸ್ ಶಾಸಕರು ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ ಎಂದು ಅವರು ಕಿಡಿಕಾರಿದರು.

"ಮಸೂದೆಯನ್ನು ಅಂಗೀಕರಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ".. ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಮತದಾರರ ಪಟ್ಟಿಗಳ ಪರಿಷ್ಕರಣೆ ಸಂದರ್ಭದಲ್ಲಿ ಇಂತಹವು ಹೆಚ್ಚಾಗಿ ಗಮನಕ್ಕೆ  ಬರುತ್ತವೆ. ಆದರೆ, ಜನರು ಸ್ವಯಂಪ್ರೇರಣೆಯಿಂದ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಇದೇ ವೇಳೆ, ಆರ್ಥಿಕವಾಗಿ ಸ್ಥಿತಿವಂತರು ಮತ್ತು ರಾಜಕೀಯ ಸಂಪರ್ಕ ಹೊಂದಿರುವ ದಲಿತರು ಮೀಸಲಾತಿಯನ್ನು ತ್ಯಜಿಸಬೇಕು, ಇದರಿಂದ ಅರ್ಹರಿಗೆ ಪ್ರಯೋಜನಗಳು ತಲುಪಬೇಕು ಎಂದು ಈಶ್ವರಪ್ಪ ಹೇಳಿದರು. 

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮನ್ಸ್‌ನ ಸಮಯವನ್ನು ಪ್ರಶ್ನಿಸುವ ಬದಲು ಇಡಿ ಮುಂದೆ ಹಾಜರಾಗಬೇಕು ಎಂದು ಹೇಳಿದ ಈಶ್ವರಪ್ಪ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಬಗ್ಗೆ ವಾಗ್ದಾಳಿ ನಡೆಸಿ ಗ್ರ್ಯಾಂಡ್ ಓಲ್ಡ್ ಪಾರ್ಟಿ ಅಖಂಡ ಭಾರತವನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದರು.
 

SCROLL FOR NEXT