ಬೆಂಗಳೂರು: ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆ ಹಾವೇರಿಯ ಶಿಗ್ಗಾವಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಸವರಾಜ ಬೊಮ್ಮಯಿ ಜನತಾದಳ ಮೂಲದ ನಾಯಕ, ಹೀಗಾಗಿ ಅವರ ರಕ್ಷಣೆಗೆ ಜೆಡಿಎಸ್ ಮುಂದಾಗುವ ಸಾಧ್ಯತೆಯಿದೆ, ಈ ಹಿನ್ನೆಲೆಯಲ್ಲಿ ದಳಪತಿಗಳು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಧಾರವಾಡದ ಮಾಜಿ ಶಾಸಕ ವಿನಯ್ ಕುಲಕರ್ಣಿ ಅಥವಾ ಪಂಚಮಸಾಲಿ ಲಿಂಗಾಯತ ಸಮುದಾಯದ ಮಂಜುನಾಥ ಕುನ್ನೂರ ಅವರನ್ನು ಸದರಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವ ಮೊದಲು ರಾಜಕೀಯ ಲೆಕ್ಕಾಚಾರಕ್ಕೆ ಮುಂದಾಗಿದ್ದು ಕೊನೆಯ ಕ್ಷಣದವರೆಗೆ ಕಾದು ನೋಡಲಿದೆ ಎದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಒಂದು ವಾರದೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮೇ 13 ರಂದು ವಿಜಯೋತ್ಸವ ನಮ್ಮದೆ: ನಳಿನ್ ಕುಮಾರ್ ಕಟೀಲ್
ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ವಿನಯ್ ಕುಲಕರ್ಣಿಯನ್ನು ಧಾರವಾಡದಿಂದ ಶಿಗ್ಗಾವಿ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ, ಹೀಗಾಗಿ ಮಂಜುನಾಥ್ ಕುನ್ನೂರಿಗೆ ಧಾರವಾಡಕ್ಷೇತ್ರದ ಟಿಕೆಟ್ ಸಿಗಲಿದೆ. ಕಾಂಗ್ರೆಸ್ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಹತ್ತಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ 2018ರ ಚುನಾವಣೆಯಲ್ಲಿ ರನ್ನರ್ ಅಪ್ ಆಗಿದ್ದ ಸೈಯದ್ ಅಜೀಂಪೀರ್ ಖಾದ್ರಿ ವಿನಯ್ ಕುಲಕರ್ಣಿಗೆ ತಮ್ಮ ಕ್ಷೇತ್ರ ತ್ಯಾಗ ಮಾಡಬಹುದು. ಆದರೆ ಜಿಲ್ಲೆಗೆ ಹೊರಗಿನವರಾದ ಕುಲಕರ್ಣಿ ಇಲ್ಲಿಂದ ಸ್ಪರ್ಧಿಸುವ ವಿಚಾರಕ್ಕೆ ಇತರೆ ಆಕಾಂಕ್ಷಿಗಳು ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದು ಪಕ್ಷದೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಹಾಗೂ ಕೆಲವು ಬಂಡಾಯಗಾರರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ, ಜೆಡಿಎಸ್ ಕೂಡ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂದು ಮೂಲಗಳು ತಿಳಿಸಿವೆ. 2018ರ ಚುನಾವಣೆಯಲ್ಲಿ 7 ಸಾವಿರಕ್ಕೂ ಅಧಿಕ ಮತ ಪಡೆದ ಯಾಸಿರ್ ಖಾನ್ ಪಠಾಣ್ ಮತ್ತು ಸೋಮಣ್ಣ ಬೇವಿನಮರದ್ ಅವರೂ ಸೇರಿದ್ದಾರೆ.
ಜೆಡಿಎಸ್ ನಾಯಕತ್ವದೊಂದಿಗೆ ಬೊಮ್ಮಾಯಿ ಉತ್ತಮ ಒಡನಾಟ ಹೊಂದಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಬೊಮ್ಮಾಯಿ ಆಶೀರ್ವಾದ ಪಡೆದಿದ್ದರು. ಬೊಮ್ಮಾಯಿ ಅವರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಯೋಜಿಸಿದರೆ, ಜೆಡಿಎಸ್ ತನ್ನ ಪ್ಲಾನ್ ಜಾರಿಗೊಳಿಸಲು ಮುಂದಾಗಿ ಸಿಎಂ ಅವರ ರಕ್ಷಣೆಗೆ ಬರಬಹುದು ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ: ಸಿಎಂ ಬೊಮ್ಮಾಯಿ ವಿರುದ್ಧ ತೊಡೆ ತಟ್ಟಲು ವಿನಯ್ ಕುಲಕರ್ಣಿ 'ನೆಚ್ಚಿ' ಕೂತ ಕಾಂಗ್ರೆಸ್!
ಒಂದು ವೇಳೆ ಶಿಗ್ಗಾವಿ ಸ್ಪರ್ಧೆ ಕಠಿಣವಾಗಬಹುದು ಎಂದು ಬೊಮ್ಮಾಯಿ ಭಾವಿಸಿದರೆ, ಅವರು ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬದಲಾಗಬಹುದು ಎಂದು ಹೇಳಲಾಗಿದೆ. ಇದರರ್ಥ 77 ವರ್ಷ ವಯಸ್ಸಿನ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಎಸ್ಎ ರವೀಂದ್ರನಾಥ್ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ. ಬಿಜೆಪಿಗೆ ಬೊಮ್ಮಾಯಿ ಅವರ ಗೆಲುವು ಮಹತ್ವ ಎಂದು ಭಾವಿಸಿದರೆ, ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಅವರನ್ನು ಕೇಳಬಹುದು ಎಂದು ಮೂಲಗಳು ತಿಳಿಸಿವೆ.