ರಾಜಕೀಯ

ರಾಹುಲ್ ಗಾಂಧಿ ಅನರ್ಹತೆ: ಕಾಂಗ್ರೆಸ್‌ಗೆ ಪ್ರಚಾರದ ವಿಷಯ; ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕೊಡುಗೆ ನೀಡುತ್ತದೆ- ವೀರಪ್ಪ ಮೊಯ್ಲಿ

Ramyashree GN

ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಚಾರದ ವಿಷಯವಾಗಲಿದೆ ಮತ್ತು ಇದು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕೊಡುಗೆ ನೀಡುತ್ತದೆ ಎಂದು ಪಕ್ಷದ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಸೋಮವಾರ ಹೇಳಿದ್ದಾರೆ.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲದ 'ಅಲೆ' ಇದೆ ಮತ್ತು ಭ್ರಷ್ಟಾಚಾರ ವಿಷಯಗಳ ಬಗ್ಗೆ ತಮ್ಮ ಪಕ್ಷದ ಪ್ರಚಾರವು ಕೆಲಸ ಮಾಡಿದೆ. ಆದರೆ ಬಿಜೆಪಿಯು 'ಬಲವಾದ ಆಡಳಿತ ವಿರೋಧಿ ಅಲೆ'ಯನ್ನು ಎದುರಿಸುತ್ತಿದೆ ಎಂದು ಹೇಳಿದರು.

ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಅನರ್ಹತೆಯು ಕಾಂಗ್ರೆಸ್‌ನ 'ರಾಜಕೀಯ ಲಾಭ'ಕ್ಕೆ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಖಂಡಿತವಾಗಿ, ಇದು (ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆ) ಪ್ರಚಾರದ ವಿಷಯವಾಗಿದೆ. 'ಇದು ದೇಶದ ಎಲ್ಲೆಡೆ ಇದೆ; ಇದು ಸೇಡಿನ ರಾಜಕೀಯದ ಉತ್ತುಂಗವನ್ನು ತೋರಿಸುತ್ತದೆ' ಎಂದು ಹೇಳಿದರು.

ಬಿಜೆಪಿ ಪತನಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದಾಗಿರುವ ಈ ವಿಷಯವು ಕಾಂಗ್ರೆಸ್ ಪರ ಭಾಗಶಃ ಅನುಕಂಪದ ಅಲೆಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ತಮ್ಮ ಪಕ್ಷದ ಪ್ರಚಾರವು ಆಡಳಿತಾರೂಢ ಬಿಜೆಪಿಗಿಂತ ಹೆಚ್ಚು ಆಕ್ರಮಣಕಾರಿಯಾಗಿದೆ. ಇದು ನರೇಂದ್ರ ಮೋದಿ-ಅಮಿತ್ ಶಾ ಇಮೇಜ್ ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಬಿಜೆಪಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸೇಡಿನ ರಾಜಕೀಯವನ್ನು ತೋರಿಸುವ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಗೊಂದಲ ಮೂಡಿಸಿದೆ ಎಂದು ಆರೋಪಿಸಿದರು. 

ಒಬಿಸಿ ವರ್ಗದೊಳಗೆ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಮತ್ತು ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ತಲಾ ಶೇ 2ರಷ್ಟು ಹೆಚ್ಚುವರಿ ಮೀಸಲಾತಿ ನೀಡುವ ಮತ್ತು ಎಸ್‌ಸಿ ವರ್ಗದ ಅಡಿಯಲ್ಲಿ ಬರುವ ಸಮುದಾಯಗಳ ವಿವಿಧ ದಲಿತರಿಗೆ ಒಳಮೀಸಲಾತಿಯನ್ನು ನೀಡಲು ನಾಲ್ಕು ಉಪವರ್ಗಗಳನ್ನು ರಚಿಸುವ ಬಸವರಾಜ ಬೊಮ್ಮಾಯಿ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮೊಯ್ಲಿ ಉಲ್ಲೇಖಿಸಿದರು. 

SCROLL FOR NEXT