ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಮ್ ಆದ್ಮಿ ಪಕ್ಷ(ಎಎಪಿ) ‘ಡಿಗ್ರಿ ದೀಖಾವೋ’ ಅಭಿಯಾನ ಆರಂಭಿಸಿರುವ ಮಧ್ಯೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಶೈಕ್ಷಣಿಕ ಅರ್ಹತೆ ಮುಖ್ಯವಲ್ಲ. ಆದರೆ ನಮ್ಮ ತತ್ವದ ಪ್ರಶ್ನೆ ಮತ್ತು ಚುನಾವಣಾ ಅಫಿಡವಿಟ್ನಲ್ಲಿ ಸಾರ್ವಜನಿಕರ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆಯೇ ಎಂಬುದು ಮುಖ್ಯ ಎಂದಿದ್ದಾರೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಚಾರದ ಭಾಗವಾಗಿ ಬೆಂಗಳೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಚುನಾವಣಾ ಅಫಿಡವಿಟ್ನಲ್ಲಿ ನೀವು ಏನಾದರೂ ಸುಳ್ಳು ಹೇಳಿದರೆ, ಅದು ನಿಜವಾಗಿಯೂ ಅನರ್ಹತೆಗೆ ಪ್ರಮುಖ ಕಾರಣವಾಗುತ್ತದೆ ಮತ್ತು ಇದೊಂದು ಗಂಭೀರ ಆರೋಪ. ಆದರೆ ನನಗೆ ಅವರ ಪದವಿಯ ಬಗ್ಗೆ ಸಮಸ್ಯೆ ಇಲ್ಲ. ಅವರ ನೀತಿಗಳ ಬಗ್ಗೆ ಕಳವಳ ಇದೆ ಎಂದಿದ್ದಾರೆ.
ಜನರನ್ನು ಪ್ರತಿನಿಧಿಸುವ ರಾಜಕೀಯ ನಾಯಕರಿಗೆ ಶೈಕ್ಷಣಿಕ ಅರ್ಹತೆ ಬೇಕಾಗಿಲ್ಲ. ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದವರೂ ಚುನಾವಣೆ ಗೆಲ್ಲಬಹುದು ಎಂದು ವಿವರಿಸಿದರು.
ತಮ್ಮ ಪುಸ್ತಕ 'ಅಂಬೇಡ್ಕರ್, ಎ ಲೈಫ್' ಮತ್ತು 'ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯದ ಪಾತ್ರ' ಎಂಬ ವಿಷಯದ ಕುರಿತು ಸಂವಾದದಲ್ಲಿ ಮಾತನಾಡಿದ ತರೂರ್, ಅಂಬೇಡ್ಕರ್ ಅವರು ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದರು ಎಂದರು.
ಇದನ್ನು ಓದಿ: ನಾಯಕರಿಗೆ ಸಿಎಂ ಆಗುವ ಕನಸು ಸಹಜ; ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯ ಕಾಂಗ್ರೆಸ್ ನಲ್ಲಿಲ್ಲ: ತರೂರ್
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೋರಾಟವನ್ನು ವಿವರಿಸಿದ ಕಾಂಗ್ರೆಸ್ ನಾಯಕ, ಅವರ ಹೋರಾಟ ಹಿಂದುಳಿದವರಿಗೆ ಸ್ಫೂರ್ತಿಯಾಗಿದೆ ಎಂದರು. ಅಲ್ಲದೆ ಕೇಂದ್ರ ಸರ್ಕಾರದಿಂದ ಎನ್ಆರ್ಸಿ ಅನುಷ್ಠಾನದ ವಿರುದ್ಧ ನವದೆಹಲಿಯ ಕರೋಲ್ ಬಾಗ್ ನಿವಾಸಿಗಳ ಹೋರಾಟದಿಂದ ನಾವು ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು.