ರಾಜಕೀಯ

ಭಗವಂತನ ಸಂದೇಶ ಎಂದು ಕಾಣುತ್ತದೆ, ನಿರೀಕ್ಷೆ ಮಾಡಿರಲಿಲ್ಲ: ವರುಣಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾದ ವಿ ಸೋಮಣ್ಣ

Sumana Upadhyaya

ಬೆಂಗಳೂರು: ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿದ್ದೇನೆ, ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಾದ ವಿಷಯಗಳನ್ನು ತಂದಿದ್ದೆ. ನಮ್ಮ ಬಿಜೆಪಿ ರಾಷ್ಟ್ರೀಯ ಪಕ್ಷ ಶಿಸ್ತಿನ ಪಕ್ಷವಾಗಿದ್ದು ನನಗೆ ತಾಯಿ ಇದ್ದ ಹಾಗೆ ಎಂದು ವಸತಿ ಸಚಿವ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಸ್ಪರ್ಧಿಸುತ್ತಿರುವ ವಿ ಸೋಮಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ವರಿಷ್ಠರ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ. ಈ ಹಿಂದೆ ದೇವದುರ್ಗ, ಕೊಪ್ಪಳ, ಕಡೂರು, ಚೆನ್ನಪಟ್ಟಣ, ಚಿಂಚೋಳಿ, ತುಮಕೂರು ಲೋಕಸಭಾ ಕ್ಷೇತ್ರ, ಸಿಂದಗಿ, ಬಸವಕಲ್ಯಾಣ ಹೀಗೆ ಅನೇಕ ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆಗಳನ್ನು ಎದುರಿಸಿದ್ದೇನೆ, ನನ್ನ ಸ್ವಂತದಲ್ಲಿಯೇ 11 ಚುನಾವಣೆಗಳನ್ನು ಎದುರಿಸಿ ಕೆಲಸ ಮಾಡಿದ ಅನುಭವ ನನಗಿದೆ ಎಂದರು.

ಇದು ಭಗವಂತನ ಸಂದೇಶ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಹೇಳಿರುವುದು ಭಗವಂತನ ಸಂದೇಶ ಎಂದು ಭಾವಿಸುತ್ತೇನೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಭಗವಂತ ನನ್ನ ಕೆಲಸ, ಕಾರ್ಯಗಳನ್ನು ನೋಡಿ, ರಾಷ್ಟ್ರೀಯ ನಾಯಕರು ನನ್ನಲ್ಲಿ ಗೆಲ್ಲುವ ಶಕ್ತಿಯಿದೆ ಎಂದು ಗಮನಿಸಿರಬಹುದು ಎಂದರು.

ಈ ಹಿಂದೆ ಚಿಂಚೋಳಿಯಲ್ಲಿ ಗೆಲ್ಲೋದು ಇಲ್ಲ ಅಂದರು, ದೇವದುರ್ಗದಲ್ಲಿ ಚುನಾವಣೆ ಮಾಡೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು, ಆದರೆ ಎಲ್ಲಾ ಕಡೆ ಸಾಧಿಸಿ ತೋರಿಸಿದ್ದೇನೆ, ಈ ಬಾರಿ ಕೂಡ ಗೆಲ್ಲುವ ವಿಶ್ವಾಸವಿದೆ. ನನ್ನ ಮೇಲೆ ನಂಬಿಕೆಯಿಟ್ಟು ಹೈಕಮಾಂಡ್ ಟಿಕೆಟ್ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಕಳೆದ 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದು ಬೆಳೆದಿದದೇನೆ. ಇದೇ ಶುಕ್ರವಾರದಿಂದ ಪ್ರಚಾರ ಆರಂಭಿಸುತ್ತೇನೆ. ಪಕ್ಷ, ಪಕ್ಷದ ಸಂದೇಶ, ಪಕ್ಷದ ಯೋಜನೆಗಳು, ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ವರುಣಾ ಕ್ಷೇತ್ರಕ್ಕೆ ಹೋಗುತ್ತೇನೆ ಎಂದರು. 

SCROLL FOR NEXT