ಬೆಂಗಳೂರು: ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಲಿಂಗಾಯತ ಸಮುದಾಯದ ಮತದಾರರನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ರಾಹುಲ್ ಗಾಂಧಿಯನ್ನು ಕರೆತರಲಿದೆ.
ಬಸವ ಜಯಂತಿಯನ್ನು ಏಪ್ರಿಲ್ 23 ರಂದು ರಾಜ್ಯದಾದ್ಯಂತ ಲಿಂಗಾಯತ ಸಮಾಜದವರು ಹಬ್ಬವನ್ನಾಗಿ ಆಚರಿಸುತ್ತಾರೆ.
ಬಿಜೆಪಿಯಿಂದ ಹಿರಿಯ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಬಿಜೆಪಿಯ ಲಿಂಗಾಯತ ಮತ ಬ್ಯಾಂಕ್ ವಿಭಜನೆಗೊಳ್ಳುವ ಬಗ್ಗೆ ಉತ್ಸುಕತೆಯಿಂದ ಕೂಡಿರುವ ಕಾಂಗ್ರೆಸ್, ಈ ಶುಭ ಸಂದರ್ಭದಲ್ಲಿ ಸಮುದಾಯವನ್ನು ಓಲೈಸಲು ಸಿದ್ಧವಾಗಿದೆ ಎಂದು ಶನಿವಾರ ಮೂಲಗಳು ತಿಳಿಸಿವೆ.
ಗುರು ಬಸವಣ್ಣನವರ (ಲಿಂಗಾಯತ ಧರ್ಮವನ್ನು ಸ್ಥಾಪಿಸಿದ 12 ನೇ ಶತಮಾನದ ಸಮಾಜ ಸುಧಾರಕ) ಸಮಾಧಿ ಕೂಡಲ ಸಂಗಮದಲ್ಲಿದೆ. ಲಿಂಗಾಯತರೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ರವಾನಿಸಲು ಕಾಂಗ್ರೆಸ್ ಬಯಸಿದೆ.
ಮೂಲಗಳ ಪ್ರಕಾರ, ಈ ಕಾರ್ಯಕ್ರಮವನ್ನು ಸಂಘಟನೆಯಿಂದ ಆಯೋಜಿಸಲಾಗಿದೆಯೇ ಹೊರತು ಪಕ್ಷದಿಂದಲ್ಲ.
ಇದನ್ನೂ ಓದಿ: 'ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವ' ನಾಶಪಡಿಸಲು ಪಟ್ಟಭದ್ರ ಹಿತಾಸಕ್ತಿಗಳ ಯತ್ನ: ಆತಂಕದಲ್ಲಿ ಲಿಂಗಾಯತರು!
ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ವ್ಯವಸ್ಥೆ ಮಾಡಿದ್ದಾರೆ. ಕೆಪಿಸಿಸಿ ಪ್ರಚಾರ ಅಭಿಯಾನದ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಅವರು ರಾಹುಲ್ ಗಾಂಧಿಯವರ ಆತಿಥ್ಯ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಎಲ್ಲಾ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಗಮೇಶ್ವರ ದೇವಸ್ಥಾನ ಮತ್ತು ಬಸವಣ್ಣನವರ ಐಕ್ಯ ಮಂಟಪಕ್ಕೆ (ಸಮಾಧಿ) ಭೇಟಿ ನೀಡಲಿದ್ದಾರೆ. ಬಳಿಕ ಸ್ಥಳದಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ನ ಎಲ್ಲಾ ಲಿಂಗಾಯತ ಮುಖಂಡರು ರಾಹುಲ್ ಗಾಂಧಿ ಅವರೊಂದಿಗೆ ಸಮುದಾಯಕ್ಕೆ ಸಂದೇಶವನ್ನು ಕಳುಹಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಇದನ್ನೂ ಓದಿ: ಲಿಂಗಾಯತ ನಾಯಕರ ಬಂಡಾಯ: ಡ್ಯಾಮೇಜ್ ಕಂಟ್ರೋಲ್ ಗೆ 'ಶಾ' ತಂತ್ರ; ತಡರಾತ್ರಿ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ
ಸದ್ಯ ಲಿಂಗಾಯತ ಮತಬ್ಯಾಂಕ್ ಬಿಜೆಪಿ ಜತೆ ನಿಂತಿದ್ದು, ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಸರ್ವಪ್ರಯತ್ನ ನಡೆಸುತ್ತಿದೆ.