ರಾಜಕೀಯ

89ರ ಇಳಿವಯಸ್ಸಲ್ಲೂ ಬತ್ತದ ಉತ್ಸಾಹ, ಹಳೆ ಮೈಸೂರು ಭಾಗದಲ್ಲಿ ದೇವೇಗೌಡ ಬಿರುಸಿನ ಚುನಾವಣಾ ಪ್ರಚಾರ!

Sumana Upadhyaya

ತುಮಕೂರು: ಇತ್ತೀಚೆಗಷ್ಟೇ ಆರೋಗ್ಯದಲ್ಲಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ನಿನ್ನೆ ಸೋಮವಾರ ತುಮಕೂರು ಜಿಲ್ಲೆಯಲ್ಲಿ ತಮ್ಮ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದರು. ಜೆಡಿಎಸ್ ನ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ವ್ಯಾಪಕ ಪ್ರಚಾರ ನಡೆಸುವ ಸೂಚನೆಯನ್ನು ನೀಡಿದ್ದಾರೆ. 

ತಮ್ಮ 89ರ ಹರೆಯದಲ್ಲೂ ರಾಜಕೀಯದಲ್ಲಿ ಅವರ ಬತ್ತದ ಉತ್ಸಾಹ, ಅದಮ್ಯ ಚೇತನ ಕಂಡು ಜನರು ಅಚ್ಚರಿಯಾದರು. ತುಮಕೂರಿನ ಮಧುಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಮೇಲೆ ವಾಗ್ದಾಳಿ ನಡೆಸಿದರು. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗ ರಾಜಣ್ಣ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ದೇವೇಗೌಡರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅಂದು ನಾನು ಸೋತಂತೆ ಇಂದು ಅಂತಹ ಪರಿಸ್ಥಿತಿಯಲ್ಲಿ ರಾಜಣ್ಣನನ್ನು ನೋಡಲು ಬಯಸುತ್ತೇನೆ" ಎಂದು ದೇವೇಗೌಡರು ಹೇಳಿದರು.

ಕಾಂಗ್ರೆಸ್ ನಾಯಕರೊಬ್ಬರು (ಸಿದ್ದರಾಮಯ್ಯ) ಜೆಡಿಎಸ್‌ಗೆ 20-25 ಸೀಟುಗಳು ಈ ಬಾರಿ ಚುನಾವಣೆಯಲ್ಲಿ ಸಿಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಮಧುಗಿರಿ ಗೆಲುವು ಅವರ ಹೇಳಿಕೆಗೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ನೀಡುತ್ತದೆ ಎಂದರು.ಕೊರಟಗೆರೆ ಕ್ಷೇತ್ರದ ಹೊಳವನಹಳ್ಳಿಯಲ್ಲಿ 2013 ರಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ ಅವರನ್ನು ಸೋಲಿಸಿದ್ದ ತಮ್ಮ ಪಕ್ಷದ ಅಭ್ಯರ್ಥಿ ಪಿ ಸುಧಾಕರ್ ಲಾಲ್ ಅವರ ಪರವಾಗಿ ಅನುಕಂಪದ ಅಲೆಯನ್ನು ಮುಂದಿಟ್ಟುಕೊಂಡು ಮತಯಾಚಿಸಿದರು.ಸುಧಾಕರ್ ಲಾಲ್ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರನ್ನು ನಾಯಕನನ್ನಾಗಿ ಬೆಳೆಸಿದ್ದು ನೀವೇ. ಈ ಬಾರಿ ಅವರನ್ನು ವಿಧಾನಸೌಧಕ್ಕೆ ಕಳುಹಿಸಿ ಎಂದು ಕೇಳಿಕೊಂಡರು. 

ಇತ್ತೀಚೆಗೆ ಬೆಂಗಳೂರಿನ ಕುಂಬಳಗೋಡಿನಿಂದ ಮೈಸೂರಿಗೆ ರೋಡ್‌ಶೋನಲ್ಲಿ ಭಾಗವಹಿಸದಂತೆ ವೈದ್ಯರು ದೇವೇಗೌಡರಿಗೆ ಸಲಹೆ ನೀಡಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡು ಜೆಡಿಎಸ್ ನ ಗೆಲುವಿಗೆ ಪಣತೊಟ್ಟಿರುವ ದೇವೇಗೌಡರು ಬಿರುಬಿಸಿಲಿನ ನಡುವೆಯೂ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಹಾಸನ, ಮಂಡ್ಯ, ತುಮಕೂರು, ಮೈಸೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಸಂಚರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

SCROLL FOR NEXT