ರಾಜಕೀಯ

4 ಸಾವಿರ ಕೋಟಿ ರೂ. ಹಗರಣ ಎಂದು ಕೊಂಡಿದ್ದೆವು; ಯತ್ನಾಳ್ ಮಾಹಿತಿಯಿಂದ ನೆರವಾಗಿದೆ: ಜಿ. ಪರಮೇಶ್ವರ

Shilpa D

ಕಲಬುರಗಿ: ಕೋವಿಡ್ ಸಂದರ್ಭದಲ್ಲಿ 4 ಸಾವಿರ ಕೋಟಿ ರೂ.ಗಳ ಹಗರಣವಾಗಿರಬಹುದು ಎಂದು ನಾವು ಭಾವಿಸಿದ್ದೆವು. ಈಗ ನಮ್ಮ ಮಾಹಿತಿ ತಪ್ಪು ಎಂದು ಸ್ಪಷ್ಟವಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 4 ಸಾವಿರ ಕೋಟಿ ಅಲ್ಲ, 40 ಸಾವಿರ ಕೋಟಿ ಎಂದು ಹೇಳುವ ಮೂಲಕ ತನಿಖೆಗೆ ನೆರವಾಗಿದ್ದಾರೆ ಎಂದು ಗೃಹ ಪರಮೇಶ್ವರ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಹಗರಣದ ತನಿಖೆ ನಡೆಸಲಿದ್ದಾರೆ. ಇದು 4,000 ಕೋಟಿ ರೂ.ಗಳ ಹಗರಣ ಎಂದು ನಾವು ಭಾವಿಸಿದ್ದೆವು. ಆದರೆ, ಯತ್ನಾಳ್ ಅವರು ಒಟ್ಟು ಮೊತ್ತವನ್ನು ಬಹಿರಂಗಪಡಿಸುವ ಮೂಲಕ ತನಿಖಾ ಸಂಸ್ಥೆಗೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖಾ ಸಮಿತಿ ಕಾನೂನು ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಯಾರಿಗೆ ನೋಟಿಸ್ ನೀಡಬೇಕು, ಯಾವ ರೀತಿ ವಿಚಾರಣೆ ನಡೆಸಬೇಕೆಂಬುದನ್ನು ಸಮಿತಿ ತೀರ್ಮಾನಿಸುತ್ತದೆ ಎಂದು ಹೇಳಿದರು.

ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಯಲ್ಲಿ, ಅವ್ಯವಹಾರಗಳನ್ನು ತಡೆಗಟ್ಟಲು ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು. ಮುಂದಿನ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆಎಸ್‌ಇಟಿ) ಮತ್ತು ಪಿಎಸ್‌ಐ ನೇಮಕಾತಿ ಪರೀಕ್ಷೆಯು ಕಲಬುರಗಿ ಮತ್ತು ವಿಜಯಪುರ ಸೇರಿದಂತೆ ಇತರ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಪಿಎಸ್‌ಐ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ ವೀರಪ್ಪ ಆಯೋಗವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ವರದಿ ಬಂದ ನಂತರ ಆರೋಪಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

SCROLL FOR NEXT