ರಾಜಕೀಯ

ಯೋಜನೆಗಳನ್ನು ರೂಪಿಸಿದ್ದೇ ಕೊಳ್ಳೆ ಹೊಡೆಯಲು, ಪೊಲೀಸ್ ಇಲಾಖೆ ಉನ್ನತೀಕರಣ ಹೆಸರಲ್ಲೂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ: ಬಿಜೆಪಿ

Ramyashree GN

ಬೆಂಗಳೂರು: ಅಭಿವೃದ್ಧಿಯ ರಾಜಕಾರಣ ಎಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ ಇದು ಕಾಂಗ್ರೆಸ್ ಸಿದ್ಧಾಂತ ಎಂಬುದು ಬಹಿರಂಗ ಸತ್ಯ. ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದೂ ಅದನ್ನೇ. ಅದಕ್ಕಾಗಿ ರೂಪಿಸಿದ 2100 ಕೋಟಿ ರೂ. ವೆಚ್ಚದ ಹೆಬ್ಬಾಳದವರೆಗಿನ 6.9 ಕಿಮೀ ಉದ್ದದ ಉಕ್ಕಿನ ಫ್ಲೈಓವರ್‌ ಯೋಜನೆಯೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಯಾವಾಗ ಜನರಿಂದ ವಿರೋಧ ಬರಲು ಶುರುವಾಯಿತೋ ಆಗ ಆ ಯೋಜನೆ ಕೈಬಿಟ್ಟು ಕಮಿಷನ್ ಸಂಗ್ರಹಕ್ಕೆ  2000 ಕೋಟಿ ರೂ. ವೆಚ್ಚದ ವೈಟ್ ಟ್ಯಾಪಿಂಗ್ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದು ಎಂಬುದಕ್ಕೆ ಆ ರಸ್ತೆಯ ಗುಣಮಟ್ಟ ಸಾಕ್ಷಿಯಾಗಿ ನಿಂತಿದೆ ಎಂದು ದೂರಿದೆ.

ಪೊಲೀಸ್ ಇಲಾಖೆಯ ಉನ್ನತೀಕರಣ ಹೆಸರಲ್ಲಿಯೂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿತು. 290.48 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ, ಅದರಲ್ಲೂ 68.8 ಕೋಟಿ ರೂ. ಉಳಿಸಿಕೊಂಡು ಅದನ್ನು ನುಂಗಿ ಹಾಕಿತು. ಆ ಹಣ ಏನಾಯಿತು ಎಂಬುದೇ ತಿಳಿಯದಂತೆ ಕಡತ ರೂಪಿಸಿದ್ದು ಇದೇ ಸಿದ್ದರಾಮಯ್ಯ ಅವರು ಎಂದು ಆರೋಪಿಸಿದೆ.

ಈಗ ನಮ್ಮ ಸರ್ಕಾರ ಜನರ ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯ ಒದಗಿಸುತ್ತಾ ಬಂದಿದೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಈ ಕೆಲಸ ಮಾಡಿದ್ದಿದ್ದರೆ ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಮ್ಮ ಸರ್ಕಾರ ನಿರ್ಮಿಸುವ ಅಗತ್ಯವೇ ಇರಲಿಲ್ಲ. ಇಂತಹ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು ಎಂದು ಹೇಳಿದೆ.

ಅಧಿಕಾರದಲ್ಲಿದ್ದಾಗ ಮಾಡುವುದಿಲ್ಲ, ಬೇರೆಯವರು ಮಾಡಿದಾಗ ಸಹಿಸದಿರುವುದು ಕಾಂಗ್ರೆಸ್ ನಾಯಕರ ಜಾಯಮಾನ. ಇದು ಗೊತ್ತಿದ್ದೂ ಸುಳ್ಳು ಆರೋಪ ಮಾಡುವ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ ಸಿದ್ದರಾಮಯ್ಯ ಅವರೇ. ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ ಎಂದು ಬಿಜೆಪಿ ಆಕ್ರೋಷ ವ್ಯಕ್ತಪಡಿಸಿದೆ.

SCROLL FOR NEXT