ರಾಜಕೀಯ

ಶೃಂಗೇರಿ ಮಠವನ್ನು ಪೇಶ್ವೆಗಳ ದಾಳಿಯಿಂದ ರಕ್ಷಿಸಿದ್ದು ಟಿಪ್ಪು, ನಮಗೆ ಟಿಪ್ಪು ಬೇಕು, ರಾಣಿ ಅಬ್ಬಕ್ಕನೂ ಬೇಕು: ಹೆಚ್ ಡಿ ಕುಮಾರಸ್ವಾಮಿ

Sumana Upadhyaya

ಅರಕಲಗೂಡು(ಹಾಸನ): ಹಾಸನ ಜಿಲ್ಲೆಯ ಒಂದೊಂದು ಸೀಟು ನನಗೆ ಈ ಚುನಾವಣೆಯಲ್ಲಿ ಮುಖ್ಯವಾಗಿದೆ. ಹಾಸನ ಜಿಲ್ಲೆಯಿಂದ ಏಳಕ್ಕೆ ಏಳು ಸ್ಥಾನಗಳನ್ನು ಗೆಲ್ಲುತ್ತೇವೆ. ಹಾಸನ ಜಿಲ್ಲೆಯ ಏಳು ಸ್ಥಾನಗಳನ್ನು ಗೆಲ್ಲಬೇಕು-ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಬೇಕು ಎನ್ನುವುದೇ ನಮ್ಮ ಆಸೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಜೆಡಿಎಸ್ ನ ಪಂಚರತ್ನ ಯಾತ್ರೆ ಹಾಸನ ಜಿಲ್ಲೆ ಪ್ರವೇಶಿಸಿದೆ. ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇಂದು ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣನವರ ಇಡೀ ಕುಟುಂಬ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಭಾಗವಹಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಕರಾವಳಿ ಜಿಲ್ಲೆಗೆ ಬಂದಿದ್ದ ಕೇಂದ್ರ ಸಚಿವ ಅಮಿತ್ ಶಾ ಮಾತನಾಡುವ ವೇಳೆ ಟಿಪ್ಪು ಸರ್ಕಾರ ಬೇಕೋ, ರಾಣಿ ಅಬ್ಬಕ್ಕನ ಸರ್ಕಾರ ಬೇಕೋ ಎಂದು ಕೇಳಿದರು. ನನಗೆ ಇಬ್ಬರ ಸರ್ಕಾರವೂ ಬೇಕು
ಟಿಪ್ಪುವನ್ನು ಒಂದು ಕಡೆ ಇಡಿ, ರಾಣಿ ಅಬ್ಬಕ್ಕನ ಒಂದು ಕಡೆ ಇಡಿ, ಇಬ್ಬರೂ ಬೇಕು ನನಗೆ, ಯಾಕೆಂದರೆ ಶೃಂಗೇರಿ ಮಠವನ್ನು ಮಹಾರಾಷ್ಟ್ರದಿಂದ ಬಂದ ಪೇಶ್ವೆಗಳು ಒಡೆದಾಗ ಹಿಂದೂ ಮಠವಾದ ಶೃಂಗೇರಿ ಮಠವನ್ನು ಉಳಿಸಿದವರು ಟಿಪ್ಪು. ಹಿಂದೂ ದೇವಸ್ಥಾನವನ್ನು ಟಿಪ್ಪು ಉಳಿಸಿದ್ದಾರೆ. ಟಿಪ್ಪು ವಿಚಾರ ಒಂದು ಬದಿಗಿ ಇರಲಿ, ಇಂದು ನಾಡಿನ ಜನತೆಯನ್ನು ನಾನು ಕೇಳುತ್ತೇನೆ, ಕರ್ನಾಟಕಕ್ಕೆ ಕುವೆಂಪುರವರು ರಚನೆ ಮಾಡಿದ ಸರ್ವಜನಾಂಗದ ಶಾಂತಿಯ ತೋಟ ಬೇಕೋ, ಅಥವಾ ಬಿಜೆಪಿಯವರ ಸರ್ವಜನಾಂಗದ ಅಶಾಂತಿಯ ತೋಟ ಬೇಕೋ ಎಂದು ತೀರ್ಮಾನ ಮಾಡಿ ಎಂದು ಕೇಳಿದರು.

SCROLL FOR NEXT