ಬೆಂಗಳೂರು: ಸ್ಟೇರಿಂಗ್ ಇದ್ದವರಿಗೆ ಕುರ್ಚಿ ಇಲ್ಲ, ಕುರ್ಚಿ ಇದ್ದವರಿಗೆ ಸ್ಟೇರಿಂಗ್ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರೋದೂ ಇಲ್ಲ, ಸಿದ್ದರಾಮಯ್ಯನವರಿಗೆ ಕುರ್ಚಿ ಸಿಗೋದೂ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕೊನೆಯ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಸಿದ್ದರಾಮಯ್ಯ ಇಷ್ಟು ದಿನ ಹುಡುಕಾಟ ನಡೆಸಿ ಸೀಟು ಖರೀದಿಸಿರುವ ಸಂಗತಿ ನಿಜಕ್ಕೂ ನಾಚಿಕೆಗೇಡು.ಆದರೆ ಶ್ರೀನಿವಾಸ ಗೌಡರ ಜತೆ 17 ಕೋಟಿ ರೂ.ಗೆ ಮಾಡಿಕೊಂಡಿರುವ ಡೀಲ್ ಪ್ರಜಾಪ್ರಭುತ್ವದ ಪಾಲಿನ ದುರಂತ. ಕಾಂಗ್ರೆಸ್ ಅಧ್ಯಕ್ಷರು (ಡಿ.ಕೆ ಶಿವಕುಮಾರ್) ಟಿಕೆಟ್ ಮಾರಾಟಕ್ಕಿಟ್ಟರೆ, ವಿರೋಧ ಪಕ್ಷದ ನಾಯಕರು ಸೀಟನ್ನೇ ಖರೀದಿ ಮಾಡುವವರು. ಚುನಾವಣಾ ರಾಜಕಾರಣದಲ್ಲಿ ಹಿಂದೆಂದೂ ಕಂಡು ಕೇಳರಿಯದ ಅಕ್ರಮ-ಸಕ್ರಮ ಯೋಜನೆಗಳನ್ನು ಕಾಂಗ್ರೆಸ್ ಚಾಲನೆಗೆ ತಂದಿದೆ’ ಎಂದು ಬಿಜೆಪಿ ಆರೋಪಿಸಿದೆ.
ಕೋಲಾರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿರುವ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟೀಕೆ ಮಾಡಿದೆ. ‘ಇಷ್ಟು ದಿನ ಹುಡುಕಾಟ ನಡೆಸಿ ಈ ಸೀಟು ಖರೀದಿಸಿರುವ ಸಂಗತಿ ನಿಜಕ್ಕೂ ನಾಚಿಕೆಗೇಡಿನದ್ದು’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗಾಗಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಕ್ಷೇತ್ರ ತ್ಯಾಗ ಮಾಡುತ್ತಿರುವುದು, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀನಿವಾಸಗೌಡ ಅವರು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿರುವುದು ಇತ್ತೀಚೆಗೆ ಬಯಲಾಗಿತ್ತು.
ಇದನ್ನೂ ಓದಿ: ಸುರಕ್ಷಿತ ಕ್ಷೇತ್ರವೆಂದು ಕೋಲಾರದತ್ತ ಮುಖ ಮಾಡಿದ ಸಿದ್ದರಾಮಯ್ಯ: ಅದೇ ಹಾದಿಯಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು!
‘ಹಲವು ಕೆಟ್ಟ ಪರಂಪರೆ ಹುಟ್ಟುಹಾಕಿದ ಕೀರ್ತಿ ಇರುವ ಕಾಂಗ್ರೆಸ್ನ ಕಿರೀಟಕ್ಕೆ ಕೋಲಾರ ಸೀಟು ಖರೀದಿ ಪ್ರಹಸನ ಮತ್ತೊಂದು ಗರಿ. ಅಸ್ತಿತ್ವಕ್ಕಾಗಿ ಮಾಡುವ ಕೊನೆಯ ಹೋರಾಟಗಳಲ್ಲಿ ಎಲ್ಲಾ ನೀತಿಗಳನ್ನೂ ಬದಿಗೊತ್ತಲಾಗುತ್ತದೆ. ಆದರೆ ಈ ಪ್ರಮಾಣದಲ್ಲಿ ಆಗುತ್ತಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಬಾದಾಮಿಯಲ್ಲಿ ಹಣಬಲ ಬಳಸಿಯೂ ಅತಿಕಡಿಮೆ ಅಂತರದಿಂದ ಬಚಾವಾಗಿ ಬಂದರು. ಪ್ರತಿಬಾರಿ ಹೊಸಹೊಸ ಮಂದಿಗೆ ಮೋಸ ಮಾಡುವ ಅವರ ಈ ಬಾರಿಯ ಆಯ್ಕೆ ಕೋಲಾರ. ಆದರೆ ಅವರ ಕುಟಿಲತನವನ್ನು ಕೋಲಾರ ಜನತೆ ಆರಂಭದಲ್ಲೇ ನೋಡಿದ್ದಾರೆ‘ ಎಂದಿದೆ.
‘ಎಲ್ಲರನ್ನೂ ಎಲ್ಲಾ ಸಂದರ್ಭಗಳಲ್ಲೂ ಕೊಳ್ಳುವುದಕ್ಕೆ ಸಾಧ್ಯವಿಲ್ಲ ಸಿದ್ದರಾಮಯ್ಯನವರೇ. ನೀವು ಅಧಿಕಾರದ ಮದದಲ್ಲಿ ಡಿ.ಕೆ. ರವಿಯವರ ಧ್ವನಿ ಅಡಗಿಸಿದಿರಿ. ಹಣಬಲದಿಂದ ಪ್ರಕರಣದ ಸೊಲ್ಲಡಗಿಸಿದಿರಿ. ಈಗ ಕ್ಷೇತ್ರ ಖರೀದಿಸಿದ್ದೀರಿ, ಆದರೆ ಮತದಾರರ ಖರೀದಿ ಸಾಧ್ಯವಿಲ್ಲ. ಈ ಬಾರಿ ಕೋಲಾರದ ಜನತೆ ನಿಮಗೆ ಕಲಿಸಲಿದ್ದಾರೆ’ ಎಂದು ಭವಿಷ್ಯ ನುಡಿದಿದೆ.