ಬೆಂಗಳೂರು; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆ ಕೇಂದ್ರ ನಾಯಕರ ಭೇಟಿ ಹೆಚ್ಚಾಗುತ್ತಿದೆ. ಈಗಾಗಲೇ ಜನವರಿ ತಿಂಗಳಲ್ಲಿ 2 ಬಾರಿ ರಾಜ್ಯ ಪ್ರವಾಸ ಮಾಡಿರುವ ಪ್ರಧಾನಿ ಮೋದಿಯವರ ಕರ್ನಾಟಕ ಯಾತ್ರೆ ಫೆಬ್ರವರಿಯಲ್ಲಿಯೂ ಮುಂದುವರಿಯಲಿದೆ.
ಫೆಬ್ರವರಿ 6ರಂದು ಪ್ರಧಾನಿ ಮೋದಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯಕ್ಕೆ ಬರುತ್ತಿದ್ದಾರೆ. ಅಂದು ಧಾರವಾಡದಲ್ಲಿ ಐಐಟಿ ಉದ್ಘಾಟನೆ ಮತ್ತು ತುಮಕೂರಿನಲ್ಲಿ ಹೆಲಿಕಾಪ್ಟರ್ ಘಟಕದ ಉದ್ಘಾಟನೆ ಮಾಡಲಿದ್ದಾರೆ. ವರ್ಷದ ಆರಂಭದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಹುಬ್ಬಳ್ಳಿಗೆ ಆಗಮಿಸಿ ನಂತರ ಕಲ್ಯಾಣ ಕರ್ನಾಟಕ ಭಾಗ ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಮೋದಿಯವರು ಈ ಬಾರಿ ಹಳೆ ಮೈಸೂರು ಭಾಗದತ್ತ ಮುಖ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ವಿಧಾನಸಭಾ ಚುನಾವಣೆ 2023: ಮತದಾರರ ಓಲೈಸಲು ಪ್ರತೀ ಜಿಲ್ಲೆಯಲ್ಲೂ ಬಿರುಸಿನ ಪ್ರಚಾರಕ್ಕೆ ಪ್ರಧಾನಿ ಮೋದಿ ಮುಂದು!
ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಇದು ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿಯವರ ಕರ್ನಾಟಕ ಟೂರ್ನ ವಿವರ, ಇನ್ನು ಚುನಾವಣೆ ದಿನಾಂಕ ಘೋಷಣೆ ಆದ ಮೇಲೆ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ, ನಾಯಕರ ಪ್ರಚಾರ ಮತ್ತಷ್ಟು ಜೋರಾಗಲಿದೆ.