ಬೆಂಗಳೂರು: ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸಮರ ಸಾರಿವೆ. ಇದರ ಬೆನ್ನಲ್ಲೇ ಇಬ್ಬರು ಮಾಜಿ ಮುಖ್ಯಮಂತ್ರಿಗಳು ನಡೆಸಿದ ಜಂಟಿ ಸುದ್ದಿಗೋಷ್ಠಿ ಭಾರೀ ಕುತೂಹಲ ಮೂಡಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ನಡೆಸಲಿದೆ ಎಂಬ ಚರ್ಚೆ ಮಧ್ಯೆಯೇ ಇಬ್ಬರು ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ತಿರೋದು ಮೈತ್ರಿ ವಿಚಾರಕ್ಕೆ ಇಂಬು ನೀಡುತ್ತಿದೆ.
ಬಿಜೆಪಿ ಸದಸ್ಯರ ಅಮಾನತು ಬಳಿಕ ಕಮಲ-ದಳ ಮೈತ್ರಿಗೆ ಹೊಸ ಬೆಸುಗೆ ಬೆಸೆದಿದೆ. ಜಂಟಿ ಹೋರಾಟ ನಡೆಸಿದ್ದ ಹಳೇ ದೋಸ್ತಿಗಳು, ಈಗ ಜಂಟಿ ಸುದ್ದಿಗೋಷ್ಠಿ ನಡೆಸಿವೆ. ಸರ್ಕಾರದ ವಿರುದ್ಧ ನಾವು ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದೇವೆ. ಇದೆಲ್ಲವೂ ರಾಜ್ಯದ ಜನರ ಹಿತದೃಷ್ಟಿಯಿಂದಾಗಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಲೋಕಸಭಾ ಚುನಾವಣೆ ಪೂರ್ವ ಮೈತ್ರಿ ಬಗ್ಗೆ ಹಾರಿಕೆ ಉತ್ತರ ನೀಡಿದ್ದಾರೆ.
ಬಿಜೆಪಿ ಬೆಂಬಲದೊಂದಿಗೆ ಕೆಲವು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಜೆಡಿಎಸ್ ಹೊಂದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಜೆಡಿಎಸ್ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ. ಆದರೆ, ಈ ಪ್ರಸ್ತಾವನೆ ಆರಂಭಿಕ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಾಂಗ್ರೆಸ್ ಗೆ ನಮ್ಮ ಅಗತ್ಯವಿಲ್ಲ; ಬಿಜೆಪಿ ಜೊತೆ ಜೆಡಿಎಸ್ ವಿಲೀನ ಇಲ್ಲ; ಕೇಂದ್ರದಲ್ಲಿ ಸಚಿವ ಸ್ಥಾನ ಕೇಳಿಲ್ಲ: ಎಚ್.ಡಿಕೆ
2006ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸದಿದ್ದರೂ, 19 ಶಾಸಕರನ್ನು ಹೊಂದಿರುವ ಜೆಡಿಎಸ್ ಈಗಾಗಲೇ ಕುಮಾರಸ್ವಾಮಿ ಅವರನ್ನು ತನ್ನ ಸಭಾನಾಯಕ ಎಂದು ಘೋಷಿಸಿದೆ. ಬಿಜೆಪಿ 10 ಶಾಸಕರ ಅಮಾನತು ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ಕುಮಾರಸ್ವಾಮಿ ಕೇಸರಿ ಪಡೆಗೆ ಬೆಂಬಲಿಸಿದರು.
ಕರ್ನಾಟಕದಲ್ಲಿ ತನ್ನದೇ ಆದ ಅಸ್ತಿತ್ವ ಹೊಂದಿರುವ ಜೆಡಿಎಸ್ಗೆ ಕುಮಾರಸ್ವಾಮಿ ಬಿಜೆಪಿ ಅಥವಾ ಎನ್ಡಿಎ ಜೊತೆ ಕೈ ಜೋಡಿಸುವುದು ಒಳ್ಳೆಯದಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿಗೆ ವಿರೋಧ ಪಕ್ಷದ ನಾಯಕನಾಗಲು ಯಾವುದೇ ಪ್ರಬಲ ಅಭ್ಯರ್ಥಿ ಇಲ್ಲ ಎಂದು ಅವರು ಭಾವಿಸಿದರೆ ಅಥವಾ ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕು ಎಂದು ಅವರಿಗೆ ಅನಿಸಿದರೇ ಅದು ಕೇವಲ ಅವರ ಅಲ್ಪಾವಧಿಯ ಕನಸು ಎಂದು ತಜ್ಞರು ಹೇಳಿದ್ದಾರೆ.