ನವದೆಹಲಿ: ಕೆಲವರ ರಾಜಿ ರಾಜಕಾರಣದಿಂದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಹೊಂದಾಣಿ ರಾಜಕಾರಣದಿಂದ ಬಿಜೆಪಿ ಸೋತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ. ಹೊಂದಾಣಿ ರಾಜಕಾರಣದಿಂದ ಬಿಜೆಪಿ ಸೋತಿದೆ. ಈ ನಡೆ ಅನುಸರಿಸದಿದ್ದಿದ್ದರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಇದನ್ನು ಓದಿ: ಸರಣಿ ಸಭೆಗಳ ಬಳಿಕವೂ ಇನ್ನೂ ಅಂತಿಮಗೊಂಡಿಲ್ಲ ವಿಪಕ್ಷ ನಾಯಕನ ಆಯ್ಕೆ; ಸೋಲಿಗೆ 3 ಕಾರಣಗಳ ಕಂಡುಕೊಂಡ ಬಿಜೆಪಿ
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು, ಆದರೆ ಆರ್ಎಸ್ಎಸ್ ನಾಯಕರದ್ದು ಓದಬಾರದಾ? ಎಂದು ಪ್ರಶ್ನಿಸಿದರು.
ಇವರು ಪಠ್ಯದಿಂದ ಆರ್ ಎಸ್ಎಸ್ ನಾಯಕರನ್ನು ಹೊರಹಾಕಬಹುದು. ಆದರೆ ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ಆರ್ಎಸ್ಎಸ್ ವಿಚಾರದಲ್ಲಿ ನೆಹರು, ಇಂದಿರಾ ಗಾಂಧಿ ಸೋತಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ವಾಗ್ದಾಳಿ ನಡೆಸಿದರು.