ರಾಜಕೀಯ

ತಾಲಿಬಾನ್ ಅಡಳಿತ- ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಛಾಟಿ ಏಟು: ಖಜಾನೆ ತುಂಬಿದರೆ ಸಾಕು ಎನ್ನುವ ಹಿಟ್ಲರ್ ಸರ್ಕಾರ!

Shilpa D

ಬೆಂಗಳೂರು: ರಾಜ್ಯದಲ್ಲಿ ಹಿಟ್ಲರ್‌ ಸರ್ಕಾರದಿಂದ (ಕಾಂಗ್ರೆಸ್‌) ತಾಲಿಬಾನ್ ಅಡಳಿತಕ್ಕೆ ಒತ್ತು ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕರ್ನಾಟಕದಲ್ಲಿ ತಾಲಿಬಾನ್ ಅಡಳಿತ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಛಾಟಿ ಏಟು, ಯಾವುದು ಆಕ್ಷೇಪಾರ್ಹ, ಯಾವುದು ಅವಹೇಳನಕಾರಿ ಎಂದು ಸರ್ಟಿಫಿಕೇಟ್ ಕೊಡುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕೆಲಸವಲ್ಲ ಎಂದು ಟೀಕಿಸಿದೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಇದರಲ್ಲಿ ಮೂಗು ತೂರಿಸುತ್ತಿರುವ ಸಿದ್ದರಾಮಯ್ಯರವರ ಸರ್ಕಾರ ಪೂರ್ವಾಗ್ರಹ ಪೀಡಿತವಾಗಿದೆ.

ಸಾಮಾಜಿಕ ಜಾಲತಾಣದ ಮೇಲೆ ನಿರ್ಬಂಧ, ರಾಜಕೀಯ ವಿರೋಧಿಗಳ ಮೇಲೆ ನಕಲಿ ಕೇಸ್, ಸರ್ಕಾರವನ್ನು ಪ್ರಶ್ನಿಸುವ ಸರ್ಕಾರಿ ನೌಕರರ ಅಮಾನತು, ಕ್ರಾಂತಿಕಾರಿಗಳ ಬಗೆಗಿನ ಪಠ್ಯಕ್ಕೆ ಕೊಕ್, ತುಷ್ಟೀಕರಣದ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಚಂಡಮಾರುತದ ಅಬ್ಬರಕ್ಕೆ ಕಂಗಾಲಾದ ಮೀನುಗಾರರನ್ನು ಕೇಳುವರರಿಲ್ಲ, ಜಲಾಶಯ ಬರಿದಾಗಿ ಬಿತ್ತನೆ ಮಾಡಲಾಗದೆ ಕೈಕಟ್ಟಿ ಕೂತ ಅನ್ನದಾತನ ಕಣ್ಣೀರು ಒರೆಸುವವರಿಲ್ಲ. ಜನಸಾಮಾನ್ಯನ ಮೇಲೆ ಬೆಲೆ ಏರಿಕೆಯ ಬರೆ. ಕೈಗಾರಿಕೆಗಳು ಮುಚ್ಚುವ ಭೀತಿ, ಉದ್ಯೋಗ ನಷ್ಟಕ್ಕೆ ಪರಿಹಾರವಿಲ್ಲ! ಇವುಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಮೈಮರೆತಿದೆ ಎಂದು ಬಿಜೆಪಿ ಟೀಕಿಸಿದೆ.

ರಾಜ್ಯದಲ್ಲಿ ಎಟಿಎಂ ಸರ್ಕಾರದ ವಿದ್ಯುತ್ ದರ ಏರಿಕೆ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಜನತೆಯ ಕೂಗು, ಸಿದ್ದರಾಮಯ್ಯ ಅವರ ಕಿವುಡು ಎಟಿಎಂ ಸರ್ಕಾರಕ್ಕೆ ಕೇಳುತ್ತಿಲ್ಲ. ಖಜಾನೆ ತುಂಬಿದರೆ ಸಾಕು ಎನ್ನುವ ಹಿಟ್ಲರ್ ಸರ್ಕಾರದ ಮನಸ್ಥಿತಿಗೆ ಧಿಕ್ಕಾರ ಎಂದು ಬಿಜೆಪಿ ಟ್ವೀಟ್ ಮಾಡಿದೆ.

SCROLL FOR NEXT