ರಾಜಕೀಯ

ಪ್ರಬುದ್ಧ ರಾಜಕಾರಿಣಿ ಮಹಾದೇವಪ್ಪಗೆ ಸಚಿವರಾಗಿ ಕೆಲಸ ಮಾಡೋದಕ್ಕಿಂತ ಬೇರೆಯದ್ದರ ಆಸಕ್ತಿ ಜಾಸ್ತಿ: ಸುರೇಶ್ ವ್ಯಂಗ್ಯ

Shilpa D

ಬೆಂಗಳೂರು: ಹೆಚ್‌ ಸಿ ಮಹಾದೇವಪ್ಪ ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ವಿಷಯಗಳ ಬಗ್ಗೆಯೇ ಆಸಕ್ತಿ ಜಾಸ್ತಿ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಅಧಿಕಾರ ಅವಧಿಯ ಬಗ್ಗೆ ಹೇಳಿಕೆ ನೀಡಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ವಿರುದ್ಧ ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ಡಾ.ಹೆಚ್‌ಸಿ ಮಹದೇವಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಸದಾಶಿವನಗರದಲ್ಲಿ ಮಾತನಾಡಿದ ಡಿಕೆ ಸುರೇಶ್, ಮಹದೇವಪ್ಪ ಹಿರಿಯರಿದ್ದಾರೆ. ಯಾವ ಯಾವ ಸಂದರ್ಭದಲ್ಲಿ ಯಾರ್ಯಾರಿಗೆ ಏನೇನು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಮಹದೇವಪ್ಪ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ.

ಅವರು ಸಾಕಷ್ಟು ಐಡಿಯಾಲಜಿ ಹೊಂದಿದವರು. ಅವರದ್ದೇ ಆದ ರಾಜಕೀಯ ಶಕ್ತಿ ಇಟ್ಟುಕೊಂಡಿದ್ದಾರೆ. ಹಿರಿಯ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆಯದ್ದರ ಬಗ್ಗೆ ಆಸಕ್ತಿ ಜಾಸ್ತಿ ಇದೆ ಎಂದು ಮಹದೇವಪ್ಪ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕರ ಸಹಕಾರವಿತ್ತು.. ನನಗೆ ರಾಜಕೀಯ ವಿಶ್ರಾಂತಿ ಬೇಕಿದೆ. ನನ್ನಂತಹವರಿಗೆ ರಾಜಕೀಯ ಸರಿ ಬರುವುದಿಲ್ಲ. ರಾಜಕೀಯ ಹೊರಗೆ, ಒಳಗೆ ಸರಿ ಇಲ್ಲ. ಜನರ ಸೇವೆ ಮಾಡಲು ಸಾಕಷ್ಟು ದಾರಿ ಇದೆ. ನಾನು ನನ್ನ ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ. ಪಕ್ಷದಲ್ಲಿ ನನ್ನ ಸೇವೆ ಬಗ್ಗೆ ನೀವು ಹೇಳುವ ನಾಯಕರನ್ನು ಕೇಳಿಕೊಳ್ಳಿ” ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

SCROLL FOR NEXT