ಬೆಂಗಳೂರು: ವಿಧಾನಸಭೆ ಚುನಾವಣೆಯ ಸೋಲಿನ ನಂತರ ಆಂತರಿಕ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರೇಣುಕಾಚಾರ್ಯ ಅವರು, "ಬಿಜೆಪಿ ರಾಜ್ಯಾಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಪಕ್ಷದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿಲ್ಲ; ಅದು ಲೋಕಸಭೆ ಚುನಾವಣೆಗೆ ತಯಾರಿ ಅಷ್ಟೇ: ನಳಿನ್ ಕುಮಾರ್ ಕಟೀಲು
ಭಾರತೀಯ ಜನತಾ ಪಕ್ಷ ನನಗೆ ತಾಯಿ ಸಮಾನ. ನನಗೆ ಎಲ್ಲಾ ಸ್ಥಾನ ಮಾನ ನೀಡಿರುವುದು ಬಿಜೆಪಿ. ಪಕ್ಷಕ್ಕೆ ಹೀನಾಯ ಸೋಲಾದಾಗ ನಾವೆಲ್ಲರೂ ಸತ್ಯಸಂಗತಿಗಳ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಲೇಬೇಕು. ಜನತಾ ನ್ಯಾಯಾಲಯದಲ್ಲಿ ಜನರು ತೀರ್ಪು ನೀಡಿದ್ದಾರೆ ಅದಕ್ಕೆ ನಾವು ತೆಲೆಬಾಗಲೇಬೇಕು. ಅದೇ ಜನಸಾಮಾನ್ಯರು ತಿಳಿಸಿದ ಅಭಿಪ್ರಾಯವನ್ನು ನಾನು ತಿಳಿಸುತ್ತಿದ್ದೇನೆ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ.