ರಾಜಕೀಯ

ರಾಜ್ಯದಲ್ಲಿ ಹಾಲು ಉತ್ಪಾದನೆ ಕುಸಿತ, ಬೀಫ್ ರಫ್ತಿನಲ್ಲಿ ಏರಿಕೆ; ಸೋಕಾಲ್ಡ್ ಗೋರಕ್ಷಕ ಸರ್ಕಾರ ಏಕೆ ಈ ಬಗ್ಗೆ ಚಿಂತಿಸುತ್ತಿಲ್ಲ: ಕಾಂಗ್ರೆಸ್

Nagaraja AB

ಬೆಂಗಳೂರು: ರಾಜ್ಯದಲ್ಲಿ ಹಾಲು ಉತ್ಪಾದನೆ ಕುಸಿತ ಹಾಗೂ ಬೀಫ್ ರಫ್ತಿನಲ್ಲಿ ಏರಿಕೆಗಳು ಬಿಜೆಪಿ ಹೇಳುವ ಗೋರಕ್ಷಣೆಯ ಡೋಂಗಿತನವನ್ನು ಬಯಲು ಮಾಡಿವೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತದಲ್ಲಿ ಮಾಂಸಕ್ಕಾಗಿ ಸಾಕುವ 'ಗೋವುಗಳ ಫಾರಂ' ಪರಿಪಾಠವಿಲ್ಲ, ಆದರೂ ಬೀಫ್ ರಫ್ತಿನಲ್ಲಿ ಬಿಜೆಪಿ ಆಡಳಿತದಲ್ಲಿ ಭಾರತ ನಂ1 ಆಗಿದ್ದು ಹೇಗೆ ಎಂಬುದು ಈ ಶತಮಾನದ ನಿಗೂಢ ಪ್ರಶ್ನೆ! ಎಂದಿದೆ.

ರಾಜ್ಯದಲ್ಲಿ ಹಾಲು ಉತ್ಪಾದನೆ ಗಣನೀಯ ಕುಸಿತ ಕಂಡಿದೆ ಎಂದರೆ ಸಣ್ಣ ಕೃಷಿಕರು ಸಂಕಷ್ಟದಲ್ಲಿದ್ದಾರೆ ಎಂದರ್ಥ. ಪಶು ಆಹಾರದ ಬೆಲೆ ಏರಿಕೆ, ಜಾನುವಾರು ಸಂರಕ್ಷಣಾ ಕಾಯ್ದೆ, ಚರ್ಮಗಂಟು ರೋಗ, ಮುಂತಾದವುಗಳೇ ಇದಕ್ಕೆ ಕಾರಣ.ಸೋಕಾಲ್ಡ್ ಗೋರಕ್ಷಕ ಸರ್ಕಾರ ಏಕೆ ಈ ಬಗ್ಗೆ ಚಿಂತಿಸುತ್ತಿಲ್ಲ? ಏಕೆ ರೈತರ ನೆರವಿಗೆ ಬರುತ್ತಿಲ್ಲ? ಎಂದು ವಾಗ್ದಾಳಿ ನಡೆಸಿದೆ. 

ನಂದಿನಿಯ ಮೇಲೆ ಅಮಿತ್ ಶಾ ಅವರ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವ ಸೃಷ್ಟಿಯಾಗಿದ್ದಕ್ಕೂ ಸಂಬಂಧವಿದೆಯೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದು, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದೆಯೇ ಅಥವಾ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ? ಇದೆಲ್ಲವೂ ನಂದಿನಿಯನ್ನು ಗುಜರಾತಿನ ಅಮುಲ್‌ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ  ಎಂದು ಟೀಕಿಸಿದೆ. 

SCROLL FOR NEXT