ಬೆಂಗಳೂರು: ಕನ್ನಡಿಗರು ಒಳಗೆ ಬಂದರೆ ಅವರ ಮೇಲೆ ಹಲ್ಲೆ ಮಾಡುವಂತೆ ತಮಿಳರಿಗೆ ಬಿಜೆಪಿ ಶಾಸಕ ಮುನಿರತ್ನ ಪ್ರಚೋದನೆ ನೀಡಿದ್ದಾರೆಯೇ? ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಹೇಗಾದರೂ ಮಾಡಿ ಆಡಳಿತ ಚುಕ್ಕಾಣಿ ಹಿಡಿಯಲು ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿದೆ. ಇದೀಗ ರಾಜರಾಜೇಶ್ವರಿ ನಗರದ ಸಚಿವ ಮುನಿರತ್ನ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪಿಸಿ, ಕಾಂಗ್ರೆಸ್ ನಾಯಕಿ ಕುಸುಮಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಚಿವ ಮುನಿರತ್ನ ಅವರು ಸಾರ್ವಜನಿಕ ಸಭೆಯಲ್ಲಿ ತಮಿಳಿನಲ್ಲಿ ಮಾತನಾಡುತ್ತ ‘ತಮಿಳು ಭಾಷಿಕರು ಕನ್ನಡ ಭಾಷಿಕರ ಮೇಲೆ ಹಲ್ಲೆ ಮಾಡುವಂತೆ’ ಸೂಚನೆ ನೀಡಿರುವ ಹೇಳಿಕೆ ಸಮೇತ ದೂರು ನೀಡಿದ್ದಾರೆ. ಈ ಮೂಲಕ ತಮಿಳು ಮತ್ತು ಕನ್ನಡಿಗರ ನಡುವೆ ಸಂಘರ್ಷಕ್ಕೆ ಎಡೆಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಮುನಿರತ್ನ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಮಾಜದಲ್ಲಿ ಸಾಮರಸ್ಯ ಕದಡುವುದು ಬಿಜೆಪಿಯ ಹುಟ್ಟುಗುಣ, ಮುನಿರತ್ನ ಹೊಡಿರಿ, ಬಡಿರಿ ಎಂದು ನಿರ್ದೇಶನ ನೀಡುತ್ತಿರುವುದು ಬಿಜೆಪಿ ರೌಡಿ ಮೋರ್ಚಾದವರಿಗಾ? ಅಥವಾ ಕನ್ನಡ ಭಾಷಿಕರಿಗೂ, ತಮಿಳು ಭಾಷಿಕರಿಗೂ ದ್ವೇಷ ಹಚ್ಚುವ ಕೆಲಸವೇ? ಹಿಂಸೆಗೆ ಪ್ರಚೋದಿಸುವ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಳೆದ ಬಾರಿ ಅಂದರೆ ನವೆಂಬರ್ 03, 2020ಕ್ಕೆ ನಡೆದ ಆರ್.ಆರ್.ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಳಿಕ ಬಿಜೆಪಿಯ ಎನ್. ಮುನಿರತ್ನ ಅವರ ವಿರುದ್ಧ ಸೋಲು ಕಂಡಿದ್ದರು. ಈಗ ಎರಡನೇ ಬಾರಿಗೆ ಆರ್.ಆರ್.ನಗರದಲ್ಲಿ ತಮ್ಮ ರಾಜಕೀಯ ಭವಿಷ್ಯ ಬರೆಯಲು ಮುಂದಾಗಿದ್ದು, ಇದೀಗ ಮತ್ತೊಮ್ಮೆ ಮುನಿರತ್ನ ವಿರುದ್ಧ ಅಖಾಡಕ್ಕಿಳಿದಿದ್ದಾರೆ.