ರಾಜಕೀಯ

ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ: ಕುಮಾರಸ್ವಾಮಿ

Lingaraj Badiger

ಬಾಗಲಕೋಟೆ: ಯಾವುದೇ ಕಾರಣಕ್ಕೂ ಬಿಜೆಪಿ ಈ ಬಾರಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ. ಬಿಜೆಪಿಯೊಳಗೆ ಬ್ರಾಹ್ಮಣರನ್ನು ಸಿಎಂ ಮಾಡುವ ಕೆಲಸ ಸದ್ದಿಲ್ಲದೆ ನಡೆದಿದೆ ಎಂದು ಆರೋಪಿಸಿದರು.

ಪರಿವಾರ, ಎಟಿಎಂ ಎಂದು ಟೀಕಿಸುವ ಪ್ರಧಾನಿ ಮೋದಿ, ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಏಕೆ ಮಾತನಾಡುವುದಿಲ್ಲ. ಮೋದಿ ಕೇವಲ ಬುರುಡೆ ಭಾಷಣ ಮಾಡುತ್ತಾರೆ. ಇನ್ನು ಒಂದು ವಾರ ಮಾತ್ರ ಮೋದಿ ರಾಜ್ಯಕ್ಕೆ ಬರುತ್ತಾರೆ. ನಂತರ ಮತ್ತೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದರು.

ಪ್ರಧಾನಿ ಸೇರಿದಂತೆ ಕೇಂದ್ರದ ಹಲವು ನಾಯಕರು ಚುನಾವಣೆ ಬಳಿಕ ರಾಜ್ಯಕ್ಕೆ ಟಾಟಾ ಮಾಡಿ ಹೋಗುತ್ತಾರೆ. ಮುಂದೆ ಲೋಕಸಭಾ ಚುನಾವಣೆಗೆ ಬರುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಅಂತಾರೆ, ಲೂಟಿ ಹೊಡೆಯೋದೆ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿಯಾ? ಎಂದು ಪ್ರಶ್ನಿಸಿದ ಮಾಜಿ ಸಿಎಂ, ಮೋದಿ, ಜೆಡಿಎಸ್ ಕಾಂಗ್ರೆಸ್ ನ ಬಿ ಟೀಂ ಅಂತಾರೆ, ಸಿದ್ದರಾಮಯ್ಯ ನಮ್ಮನ್ನ ಬಿಜೆಪಿ ಬಿ ಟೀಂ ಅಂತಾರೆ, ನಾನು ಯಾರ ಬಿ ಟೀಂ ಅಲ್ಲ, ನಾನು ನಾಡಿನ ಜನರ ಬಿ ಟೀಂ ಎಂದರು.

SCROLL FOR NEXT