ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೆಂದು ಸ್ವತಃ ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. ಹೀಗಾಗಿ ಸುಳ್ಳಿನ ಗ್ಯಾರೆಂಟಿಗಳನ್ನು ನೀಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯ ಎಲ್ಲ ಯೋಜನೆಗಳನ್ನು ನಾಶ ಮಾಡುತ್ತವೆ.ಇದಕ್ಕಾಗಿ ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಕರ್ನಾಟಕವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಿರಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಅವರು ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಎರಡನೇ ಸುತ್ತಿನ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ನ ವಾರಂಟಿ ಇಲ್ಲದ ಗ್ಯಾರೆಂಟಿ ಕಾರ್ಡ್ ಸುಳ್ಳಿನ ಕಾರ್ಡ್ ಆಗಿದೆ. ದೇಶದಲ್ಲಿ ಕಾಂಗ್ರೆಸ್ನ ಆಯಸ್ಸು ಮುಗಿದೆ. 2012 ರಲ್ಲೂ ಗುಜರಾತ್ನಲ್ಲಿ ಮಾದರಿ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಸುಳ್ಳಿನ ಗ್ಯಾರೆಂಟಿ ನೀಡಿತ್ತು. ಕಾಂಗ್ರೆಸ್ನ ವಾರಂಟಿ ಮುಕ್ತಾಯವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮೊದಲಿನಿಂದಲೂ ಆಂತಕವಾದಿಗಳ ತುಷ್ಟಿಕರಣ ಮಾಡುತ್ತಿದೆ. ಆತಂಕವಾದಿಗಳು ಸತ್ತಾಗ ಕಾಂಗ್ರೆಸ್ ನಾಯಕರು ಕಣ್ಣೀರು ಹಾಕಿದ್ದರು. ರಾಜ್ಯದಲ್ಲೂ ಕಾಂಗ್ರೆಸ್ ನಾಯಕರು ಆತಂಕವಾದಿಗಳ ಬೆಂಬಲಿಗೆ ನಿಲ್ಲುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಒಂದೇ ರೀತಿಯ ತತ್ವ,ನಂಬಿಕೆಗಳನ್ನು ಹೊಂದಿರುವ ಪಕ್ಷಗಳು, ಆ ಎರಡೂ ಪಕ್ಷಗಳಿಗೆ ಮತ ಹಾಕಿದರೆ ನಿಮ್ಮ ಮತಗಳು ನಿಷ್ಪ್ರಯೋಜಕವಾಗುತ್ತದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೆ, ದಲಿತರಿಗೆ ನೀಡಲಾದ ಮೀಸಲಾತಿಯನ್ನು ಹಿಂಪಡೆಯುತ್ತದೆ: ಅಮಿತ್ ಶಾ
ಕಾಂಗ್ರೆಸ್ ಮತ್ತು ಜೆಡಿಎಸ್ ಬಾಹ್ಯದಿಂದ ಬೇರೆ ಬೇರೆ ಪಕ್ಷಗಳಂತೆ ಕಂಡರೂ, ಆಂತರಿಕವಾಗಿ ಒಂದೇಯಾಗಿವೆ. ಎರಡು ಪಕ್ಷಗಳು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮಾಡುತ್ತಿವೆ. ಸಮಾಜವನ್ನು ಒಡೆಯುತ್ತಿವೆ. ಎರಡು ಪಕ್ಷಗಳ ಪ್ರಾಮುಖ್ಯತೆ ರಾಜ್ಯದ ಅಭಿವೃದ್ದಿಯಲ್ಲ ಎಂದರು.
ಬಿಜೆಪಿಯ ಸಾಧನೆಗಳು: ತಮಟೆ ಬಾರಿಸುವ ಮೂಲಕ ಚಿತ್ರದುರ್ಗದಲ್ಲಿಂದು ಬಿಜೆಪಿ ಚುನಾವಣಾ ಸಮಾವೇಶ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕನ್ನಡದಲ್ಲೇ ಮಾತು ಆರಂಭಿಸಿದರು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲಿ ಸಾರಿ ಹೇಳಿದರು. 'ಆಜಾದಿ ಕಾ ಅಮೃತ್ ಮಹೋತ್ಸವ'ದಲ್ಲಿ ಇದು ಕರ್ನಾಟಕದ ಮೊದಲ ಚುನಾವಣೆಯಾಗಿದೆ. ರಾಜ್ಯವನ್ನು ದೇಶದಲ್ಲೇ ನಂಬರ್ ಒನ್ ಮಾಡುವ ಚುನಾವಣೆ. ಮುಂದಿನ 25 ವರ್ಷಗಳಲ್ಲಿ ರಾಜ್ಯ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ಕರ್ನಾಟಕ ಬಿಜೆಪಿ ಘಟಕಕ್ಕೆ ನಾನು ಅಭಿನಂದನೆ ತಿಳಿಸುತ್ತೇನೆ. ನಿನ್ನೆ ಬಿಡುಗಡೆ ಮಾಡಿದ ಪ್ರಣಾಳಿಕೆ ಮಾದರಿಯಾದಂತಹ ಪ್ರಣಾಳಿಕೆಯಾಗಿದೆ. ಪ್ರಣಾಳಿಕೆಯು ಮಹಿಳೆಯ ಸಬಲೀಕರಣ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಪ್ರಣಾಳಿಕೆಯಾಗಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದುರಾಡಳಿತಕ್ಕೆ ಉದಾಹರಣೆ ಅಪರ್ ಭದ್ರಾ ಯೋಜನೆಯನ್ನು ನಿರ್ಲಕ್ಷಿಸಿದ್ದವು. ನಾವು ಇದಕ್ಕೆ ಚಾಲನೆ ನೀಡಿದ್ದೇವೆ. ಇದರಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ವಾಣಿವಿಲಾಸ ಜಲಾಶಯವನ್ನು ಅಭಿವೃದ್ದಿ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಲ್ಲಿ ಯೋಜನೆಗಳು ನಿದಾನಗತಿಯಲ್ಲಿ ನಡೆಯುತ್ತಿತ್ತು. ಡಬಲ್ ಇಂಜಿನ್ ಸರ್ಕರ ಅಧಿಕಾರಕ್ಕೆ ಬಂದಮೇಲೆ ರೈಲು, ರಸ್ತೆ, ಏರ್ಪೋಟ್ ನಿರ್ಮಾಣಕ್ಕೆ ವೇಗ ನೀಡಿದ್ದೇವೆ. ಕರ್ನಾಟಕದಲ್ಲಿ 9 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತೇವೆ. ಚಿತ್ರದುರ್ಗದಲ್ಲೂ 1 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತೇವೆ. ಇದರಿಂದ ಯುವಕರಿಗೆ ಕೆಲಸ ದೊರೆಯುತ್ತದೆ ಎಂದರು.
ಕಾಂಗ್ರೆಸ್ ನಿಜಲಿಂಗಪ್ಪ ಅವರಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ ಸಮಾಜದ ಜನರಲ್ಲಿ ಆಂತಕ ಸೃಷ್ಟಿಸಿದೆ. ಕಾಂಗ್ರೆಸ್ ನನಗೆ 90ಕ್ಕೂ ಹೆಚ್ಚು ಬಾರಿ ನಿಂದನೆ ಮಾಡಿದೆ ಎಂದು ವಿಶೇಷವಾಗಿ ಮೋದಿ ಒತ್ತಿ ಹೇಳಿದರು.
ಬಿಜೆಪಿಯಿಂದ ಸುರಕ್ಷಾ ಕೋಟೆ ಯೋಜನೆ: ಚಿತ್ರದುರ್ಗದ 7 ಕೋಟೆಯಂತೆ 7 ಸುರಕ್ಷಾ ಕೋಟೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮೊದಲನೆಯದು ಪಿಎಂ ಆವಾಸ್ ಯೋಜನೆ, ಗ್ಯಾಸ್, ನೀರು. ಎರಡನೇ ಯೋಜನೆ ಪ್ರತಿ ಮನೆಗು ರೇಷನ್, ಮೂರನೆ ಯೋಜನೆ ಆಯುಷ್ ಮಾನ್ ಭಾರತ್ ಯೋಜನೆ. ನಾಲ್ಕನೇದು ಮುದ್ರಾ ಯೋಜನೆ, ಐದನೇ ಯೋಜನೆ ಬೀಮಾ ಯೋಜನೆ, ಆರನೇ ಯೋಜನೆ ಮಹಿಳೆಯರಿಗೆ ಸುರಕ್ಷೆ, ಏಳನೇದಾಗಿ ಜನದನ್ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಎಸ್ಸಿ, ಎಸ್ಟಿ ವರ್ಗಕ್ಕೆ ಮತ್ತು ಒಬಿಸಿ ಸಮುದಾಯಕ್ಕೆ ಡಬಲ್ ಇಂಜಿನ್ ಸರ್ಕಾರದ ಅಡಿ ಅನೇಕ ಯೋಜನೆ ನೀಡಿದ್ದೇವೆ. ಆದಿವಾಸಿಗಳಿಗೆ ಅನೇಕ ಉತ್ತಮ ಯೋಜನೆ ನೀಡಿದ್ದೇವೆ. ಬಂಜಾರ ಮತ್ತು ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ನೀಡಿದ್ದೇವೆ. ಭೂಮಿ ಇಲ್ಲದವರಿಗೆ ಭೂಮಿ ನೀಡಿದ್ದೇವೆ. ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿದ್ದೇವೆ.
ಕಾಂಗ್ರೆಸ್ ಯಾವತ್ತು ಕೂಡ ಬಿಜೆಪಿಯ ಅಭಿವೃದ್ಧಿ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಕೇವಲ 9 ವರ್ಷಗಳಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜ್ ಪ್ರಾರಂಭಿಸಿದ್ದೇವೆ. ಚಿತ್ರದುರ್ಗದಲ್ಲೂ ಕೂಡ ಮೆಡಿಕಲ್ ಕಾಲೇಜ್ ಆರಂಭ ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ನರ್ಸಿಂಗ್ ಕಾಲೇಜ್ ಆರಂಭ ಮಾಡಿದ್ದೇವೆ ಎಂದರು.
ಆದಿವಾಸಿ ಮಕ್ಕಳಿಗಾಗಿ 400 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳು: ಬಿಜೆಪಿ ಸರ್ಕಾರ ಬಡವರ ಮಕ್ಕಳಿಗಾಗಿ ಮೆಡಿಕಲ್ ಕಾಲೇಜಿನ ಮತ್ತು ಇಂಜನೀಯರಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುತ್ತದೆ. ರೈತ ಮಕ್ಕಳಿಗೆ ರೈತ ನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಆದಿವಾಸಿ ಮಕ್ಕಳಿಗಾಗಿ 400 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳನ್ನು ಆರಂಭಿಸಿದ್ದೇವೆ. ಆದಿವಾಸಿಗಳ ವಿಕಾಸಕ್ಕೆ ಬಜೆಟ್ನಲ್ಲಿ ಒಂದು ಕಾಲು ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಮೇ 10 ರಂದು ಕಮಲದ ಗುರುತಿಗೆ ಮತ ಹಾಕಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ನೀವು ಪ್ರತಿ ಮನೆ ಮನೆ ಮನೆಗೂ ಹೋಗಿ, ಪ್ರತಿಯೊಬ್ಬ ವ್ಯಕ್ತಿಯನ್ನು ಭೇಟಿಯಾಗಿ ಬಿಜೆಪಿಗೆ ಮತ ಹಾಕಿ ಅಂತ ಹೇಳ್ತಿರಾ, ಬೂತ್ ಮಟ್ಟವನ್ನು ಗೆಲ್ಲಿಸುವಂತೆ ಕೆಲಸ ಮಾಡಿ. ಪ್ರತಿ ಪ್ರತಿ ಮನೆ ಮನೆಗೂ ಹೋಗಿ ನಮಸ್ಕಾರ ಅಂತ ಹೇಳಿ. ನಂತರ ದೆಹಲಿಯಿಂದ ಮೋದಿಜಿ ಅವರು ಬಂದಿದ್ದರು. ನಿಮಗೆ ನಮಸ್ಕಾರ ತಿಳಿಸಿ ಅಂದ್ರು ಅಂತ ಹೇಳಿ. ನಿಮ್ಮ ಆಶೀರ್ವಾದ ನನಗೆ ಶಕ್ತಿ ಬರುತ್ತದೆ. ಇದರಿಂದ ನನಗೆ ಹೆಚ್ಚಿನ ಕೆಲಸ ಮಾಡಲು ಆಗುತ್ತದೆ ಎಂದು ಹೇಳಿದರು.