ಬೆಂಗಳೂರು: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಅವಕಾಶವಾಗದಂತೆ ಪಕ್ಷದ ಅಭ್ಯರ್ಥಿಗಳು ಬೆಂಗಳೂರಿಗೆ ಆಗಮಿಸಿ ನಿರ್ದಿಷ್ಟ ಸ್ಥಳದಲ್ಲಿ ಉಳಿಯುವಂತೆ ನಿರ್ದೇಶಿಸಿದೆ.
ಎಕ್ಸಿಟ್ ಪೋಲ್ಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ, ಆದರೆ ಬಹುಮತವನ್ನು ಪಡೆಯುತ್ತೇವೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಹೇಳುತ್ತಿವೆ. ಮೂಲಗಳ ಪ್ರಕಾರ ಅಧಿಕಾರದ ಗದ್ದುಗೆ ಹಿಡಿಯಲು ಎರಡೂ ಪಕ್ಷಗಳು ಶಾಸಕರ ಬೇಟೆಗೆ ಸಿದ್ಧವಾಗಿವೆ. ಶಾಸಕರ ಬೇಟೆಯಲ್ಲಿ ಬಿಜೆಪಿ ನಿಪುಣ ಎಂದೇ ಹೆಸರಾಗಿದೆ. ಬಿಜೆಪಿ ತಂತ್ರವನ್ನು ಎದುರಿಸಲು ಕಾಂಗ್ರೆಸ್ ರಿವರ್ಸ್ ಆಪರೇಷನ್ಗೆ ಸಜ್ಜಾಗಿದೆ. ನಿಕಟ ಸ್ಪರ್ಧೆಯ ಸಾಧ್ಯತೆಯನ್ನು ತಳ್ಳಿಹಾಕದ ಕಾಂಗ್ರೆಸ್ ನಾಯಕರು ಪಕ್ಷದ ಅಭ್ಯರ್ಥಿಗಳನ್ನು ರಕ್ಷಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: ಅತಂತ್ರ ವಿಧಾನಸಭೆ ಸುಳಿವು: ನಮ್ಮ ಷರತ್ತುಗಳಿಗೆ ಒಪ್ಪುವ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ ಎಂದ ಹೆಚ್'ಡಿ.ಕುಮಾರಸ್ವಾಮಿ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ರಾತ್ರಿ ಎಲ್ಲಾ ಅಭ್ಯರ್ಥಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ, ಆಪರೇಷನ್ ಕಮಲಕ್ಕೆ ಬಲಿಯಾಗಬಾರದು ಎಂಬುದರ ಕುರಿತು ವಿವರವಾಗಿ ಮಾತನಾಡಿದ್ದಾರೆ.
ಈ ಬಾರಿ ಕಾಂಗ್ರೆಸ್ಗೆ ಸರ್ಕಾರ ರಚಿಸಲು ಅವಕಾಶ ಸಿಗಲಿದ್ದು, ಆಮಿಷಗಳಿಗೆ ಮಣಿಯಬಾರದು ಎಂದು ಮುಖಂಡರು ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ. ಗೆಲುವು ಖಚಿತವಾದ ತಕ್ಷಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅವರನ್ನು ಬೆಂಗಳೂರಿಗೆ ಕರೆ ತರಬೇಕು, ಸರ್ಕಾರ ರಚನೆಯಾಗುವವರೆಗೆ ಅಭ್ಯರ್ಥಿಗಳು ನಿರ್ದಿಷ್ಟ ಸ್ಥಳದಲ್ಲಿ ಉಳಿಯುವಂತೆಯೂ ತಿಳಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.