ವಿಜಯಪುರ: ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಮುನ್ನವೇ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪತನವಾಗಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಿನ್ನೆ ಬುಧವಾರ ವಿಜಯಪುರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ನೇಪಥ್ಯದಲ್ಲಿ ಬಿಜೆಪಿ ನಾಯಕತ್ವದಿಂದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ ವಿಳಂಬವಾಗುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಯತ್ನಾಳ್ ಉತ್ತರಿಸಿದರು.
ರಾಜ್ಯದಲ್ಲಿ ಪ್ರಸ್ತುತ ಬರ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಯತ್ನಾಳ್, ಶಾಸಕರು ಮತ್ತು ಇತರ ನಾಯಕರ ಪ್ರತ್ಯೇಕ ತಂಡವನ್ನು ರಚಿಸುವ ಮೂಲಕ ಬರ ಪೀಡಿತ ತಾಲೂಕುಗಳಲ್ಲಿ ಪ್ರವಾಸ ಮಾಡಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಯಾವ ಬಣದ ಪರ ಒಲವು ತೋರದ ಖರ್ಗೆ: ಡಿಕೆಶಿ ವಾರ್ನಿಂಗ್ ಗೆ ಡೋಂಟ್ ಕೇರ್; ಭಿನ್ನಮತ ಶಮನಕ್ಕೆ ವೇಣುಗೋಪಾಲ್- ಸುರ್ಜೇವಾಲಾಗೆ ಟಾಸ್ಕ್!
ನವೆಂಬರ್ 6 ಮತ್ತು 7 ರಂದು ನಾನು ಮೈಸೂರು ಭಾಗಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ. ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿದೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸಿಗುತ್ತಿಲ್ಲ.
ಬೆಳೆ ನಷ್ಟಕ್ಕೆ ಸರಕಾರ ಪರಿಹಾರ ನೀಡುತ್ತಿಲ್ಲ. ಎಲ್ಲ ಅಂಶಗಳನ್ನು ಪರಿಗಣಿಸಿ ನಮ್ಮ ಪಕ್ಷ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದು ಹೇಳಿದರು.