ರಾಜಕೀಯ

ಕೆಲವೊಮ್ಮೆ ನನ್ನ ಪಕ್ಷದ ಸಿದ್ಧಾಂತವನ್ನೇ ವಿರೋಧಿಸಿದ್ದೇನೆ: ಬಿಜೆಪಿ ಶಾಸಕ ಸುರೇಶ್ ಗೌಡ

Manjula VN

ತುಮಕೂರು: ಯಾವುದೇ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳುವುದು ನನಗಿಷ್ಟವಿಲ್ಲ. ಕೆಲವೊಮ್ಮೆ ನನ್ನ ಪಕ್ಷದ ಸಿದ್ಧಾಂತ, ತತ್ವಗಳನ್ನೇ ವಿರೋಧಿಸಿದ್ದೂ ಇದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಅವರು ಭಾನುವಾರ ಹೇಳಿದರು.

ತುಮಕೂರಿನ ಕನ್ನಡ ಭವನದಲ್ಲಿ ಸ್ಥಳೀಯ ಕನ್ನಡ ದಿನಪತ್ರಿಕೆ ಬೆವರ ಹನಿ 6ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಮಾಜ ಕೇಂದ್ರಿತವಾಗಿರಬೇಕು, ಎಡಪಂಥೀಯ ಮತ್ತು ಬಲಪಂಥೀಯ ಮಾರ್ಗಗಳನ್ನು ಬದಿಗಿಟ್ಟು ದೇಶವು ಎಲ್ಲರಿಗೂ ಸಮಾನತೆಯನ್ನು ಒದಗಿಸುವ ಮೂಲಕ ಪ್ರಗತಿ ಹೊಂದುವಂತೆ ಮಾಡಬೇಕು. ಈ ಮೂಲಕ ಮಹಾತ್ಮ ಗಾಂಧಿಯವರ ಕನಸನ್ನು ನನಸಾಗಿಸಬೇಕು. ನಾನು ಬಿಜೆಪಿಯಲ್ಲಿರಬಹುದು, ಆದರೆ, ಕೆಲವೊಮ್ಮೆ ನನ್ನ ಪಕ್ಷದ ಸಿದ್ಧಾಂತವನ್ನೇ ವಿರೋಧಿಸಿದ್ದೇನೆಂದು ಹೇಳಿದರು.

ಇದೇ ವೇಳೆ ಮುಂದಿನ ದಿನಗಳಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ ಸಿಎಂ ಆಗುತ್ತಾರೆಂಬ ಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಕುರಿತು ಮಾತನಾಡಿ, ಅವರ ಹೇಳಿಕೆಗೆ ನನ್ನ ಸಹಮತವಿದೆ. ಸ್ವಾತಂತ್ರ್ಯ ಬಂದಾಗಿನಿಂದ ಯಾವ ದಲಿತನೂ ರಾಜ್ಯದ ಸಿಎಂ ಆಗಿಲ್ಲ. ಈ ಬಗ್ಗೆ ನಾವೂ ಚಿಂತನೆ ನಡೆಸಬೇಕಿದೆ. ಹಾಗಾಗಿ ಪರಮೇಶ್ವರ್ ಸಿಎಂ ಆಗುವುದಾದರೆ ನಾನು ಬೆಂಬಲ ನೀಡುತ್ತೇನೆಂದು ತಿಳಿಸಿದರು.

ಜಾತಿ ಗಣತಿ ವರದಿ ಕುರಿತು ಮಾತನಾಡಿ, ಸರ್ಕಾರ ವರದಿಯನ್ನು ಅಂಗೀಕರಿಸುವ ಕುರಿತು ಚಿಂತನೆ ನಡೆಸುತ್ತಿದೆ. ಆದರೆ, ವರದಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ ಎಂದರು.

SCROLL FOR NEXT