ಬಿ.ಎಸ್ ಯಡಿಯೂರಪ್ಪ 
ರಾಜಕೀಯ

ಸಕ್ರಿಯ ರಾಜಕಾರಣದಿಂದ ದೂರವಿದ್ದರೂ ಕುಗ್ಗದ ವರ್ಚಸ್ಸು: ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಬಿಎಸ್ ವೈ ಸ್ಟಾರ್ ಕ್ಯಾಂಪೇನರ್!

ನವೆಂಬರ್ 30 ನಡೆಯಲಿರುವ ತೆಲಂಗಾಣ ಚುನಾವಣೆಯ ಪ್ರಚಾರದ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಥಾನ ಪಡೆದುಕೊಂಡಿದ್ದಾರೆ.

ಬೆಂಗಳೂರು: ನವೆಂಬರ್ 30 ನಡೆಯಲಿರುವ ತೆಲಂಗಾಣ ಚುನಾವಣೆಯ ಪ್ರಚಾರದ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಥಾನ ಪಡೆದುಕೊಂಡಿದ್ದಾರೆ. ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 40 ಸ್ಟಾರ್ ಪ್ರಚಾರಕರ ಪೈಕಿ  ಕರ್ನಾಟಕದಿಂದ ಬಿಎಸ್ ಯಡಿಯೂರಪ್ಪ ಅವರು ಕೂಡಾ ಸ್ಥಾನ ಪಡೆದಿದ್ದಾರೆ.

ತೆಲಂಗಾಣದ ಒಟ್ಟು 119 ಸ್ಥಾನಗಳಿಗೆ ನವೆಂಬರ್ 30 ರಂದು ಏಕ-ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ವೈಗೆ ಪ್ರಮುಖ ಪಾತ್ರ ನೀಡಿರಲಿಲ್ಲ. ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿತ್ತು.

ವಿಧಾನಸಭೆ ಚುನಾವಣೆಯಲ್ಲಿ‌ ಬಿಜೆಪಿ ಹೀನಾಯ ಸೋಲಿನ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಕಡೆಗಣಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ತೆಲಂಗಾಣ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ.

80 ವರ್ಷ ಸಮೀಪಿಸುತ್ತಿರುವ ಯಡಿಯೂರಪ್ಪ ಸಕ್ರಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ, ಆದರೆ ಅವರ ವರ್ಚಸ್ಸು ಕುಗ್ಗಿಲ್ಲ, ಹೀಗಾಗಿ ಮತದಾರರನ್ನು ಓಲೈಸಲು ಮುಂಬರುವ ದಿನಗಳಲ್ಲಿ ತೆಲಂಗಾಣಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ.

ಕರ್ನಾಟಕದಿಂದ ಪ್ರಲ್ಹಾದ್ ಜೋಶಿ, ಶೋಭಾ ಖಾರಂದ್ಲಾಜೆ, ಎ ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಸೇರಿದಂತೆ ನಾಲ್ವರು ಕೇಂದ್ರ ಸಚಿವರಿದ್ದರೂ, ಬಿಜೆಪಿ ಪಕ್ಷದ ಹೈಕಮಾಂಡ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಆಯ್ಕೆ ಮಾಡಿದೆ. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ವೀರಶೈವರು ಇದ್ದಾರೆ, ಯಡಿಯೂರಪ್ಪ ಅವರ ಪ್ರಚಾರದಿಂದ ಈ ಮತದಾರರನ್ನು ಸೆಳೆಯುವ ನಿರೀಕ್ಷೆಯಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಡಾ ಸಿಎನ್ ಅಶ್ವತ್ಥನಾರಾಯಣ್, ಯಡಿಯೂರಪ್ಪ ಕೇವಲ ಕರ್ನಾಟಕಕ್ಕೆ ಮಾತರ ನಾಯಕರಲ್ಲ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷದಿಂದ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ  ಎಂದು ಹೇಳಿದರು.

ತೆಲಂಗಾಣ ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಅಲ್ಲಿಯೂ ಯಡಿಯೂರಪ್ಪ ಪ್ರಭಾವ ಹೆಚ್ಚಿದೆ. ಅಲ್ಲದೆ, ಹೈದರಾಬಾದ್‌ನಲ್ಲಿ, ಯಡಿಯೂರಪ್ಪ ಅವರು ಪಕ್ಷಕ್ಕೆ ಮತಗಳನ್ನು ಪಡೆಯಲು ಸಹಾಯ ಮಾಡುವ ಶಕ್ತಿ ಹೊಂದಿದ್ದಾರೆ ಎಂದು ಅವರು ಹೇಳಿದರು. ಅಶ್ವತ್ಥನಾರಾಯಣ ಪ್ರಕಾರ, ತೆಲಂಗಾಣದಲ್ಲಿ ಬಿಎಸ್‌ವೈ ಅವರ ಉಪಸ್ಥಿತಿಯು ಪಕ್ಷಕ್ಕೆ  ಭಾರೀ ಲಾಭ ತಂದುಕೊಡುತ್ತದೆ. ಹೀಗಾಗಿ ಪಕ್ಷದ ಹೈಕಮಾಂಡ್ ಅವರನ್ನು ಆಯ್ಕೆ ಮಾಡಿದೆ ಎಂದು  ಹೇಳಿದರು. ಯಡಿಯೂರಪ್ಪ ಅವರು ಎಲೆಕ್ಟ್ರೋಲ್ ರಾಜಕೀಯದಿಂದ ಹೊರಗುಳಿದಿದ್ದರೂ, ಅವರು ಸಾಕಷ್ಟು ತಂತ್ರಜ್ಞ ಮತ್ತು ಜನಪ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಒಬ್ಬರು ಪ್ರೀತಿಸಬಹುದು ಅಥವಾ ದ್ವೇಷಿಸಬಹುದು, ಆದರೆ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. 80 ವರ್ಷದ ಯಡಿಯೂರಪ್ಪ ಅವರು ಅದೇ ಉತ್ಸಾಹದಿಂದ ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಮತ್ತು ಅವರು ತೆಲಗಾಣದಲ್ಲಿಯೂ ಅದೇ ರೀತಿ ಮಾಡಲು ಹೊರಟಿದ್ದಾರೆ ಎಂದು ಅನಾಮಧೇಯ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ