ರಾಜಕೀಯ

ಬೆಳಗಾವಿ ರಾಜಕಾರಣ ದುಬೈಗೆ ಶಿಫ್ಟ್; ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ: ಆರ್. ಅಶೋಕ್

Shilpa D

ಬೆಂಗಳೂರು: 2019 ರಲ್ಲಿ ಬೆಳಗಾವಿ ರಾಜಕಾರಣದಿಂದಾಗಿಯೇ ಸರ್ಕಾರ ಪತನವಾಗಿತ್ತು. ಈಗಲೂ ಅಂತಹ ಜ್ವಾಲೆ ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದು, ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕರನ್ನು ದುಬೈ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಹಿಂದೆ ಬೆಳಗಾವಿ ರಾಜಕಾರಣದಿಂದ ಸರ್ಕಾರವೇ ಬಿದ್ದು ಹೋಗಿತ್ತು. ಮತ್ತೆ ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಮನೆಗೆ ಹೋದರೂ ಶಾಸಕರನ್ನು ಸತೀಶ್ ಜಾರಕಿಹೊಳಿ ಕರೆದುಕೊಂಡು ಹೋಗಿದ್ದಾರೆ. ಲೋಕಸಭಾ ಚುನಾವಣೆ ನಂತರ ಸರ್ಕಾರ ಇರೋದಿಲ್ಲ. ಕಾಂಗ್ರೆಸ್​​ನ ಅವನತಿಗೆ ಇದೆಲ್ಲವೂ ಕಾರಣ. ರಾಜ್ಯದಲ್ಲಿ ಒಬ್ಬರು ಅಲ್ಲ, ಮೂವರು ಸಿಎಂ ಗಳಿದ್ದಾರೆ ಮುಂದೆ ಅವರು ಯಾವ ಯಾವ ದಿಕ್ಕಿನಲ್ಲಿ ಹೋಗ್ತಾರೋ ನೋಡೋಣ ಎಂದು ಹೇಳಿದರು.

ಇದಕ್ಕೂ ಮುನ್ನ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮನೆಗೆ ನಿರ್ಮಲಾನಂದನಾಥ ಶ್ರೀಗಳು ಭೇಟಿ ನೀಡಿ, ಬೊಮ್ಮಾಯಿ ಅವರ ಯೋಗಕ್ಷೇಮ ವಿಚಾರಿಸಿದರು. ಸುತ್ತೂರು ಮಠದ ಸ್ವಾಮೀಜಿಗೆ ಕರೆ ಮಾಡಿ ಮಾತನಾಡಿದ್ದ, ಉಳಿದ ಧಾರ್ಮಿಕ ಮುಖಂಡರನ್ನು ಶೀಘ್ರವೇ ಭೇಟಿ ಮಾಡಿ ಆಶೀರ್ವಾದ ಪಡೆಯುವುದಾಗಿ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಿಂದ ಬರ ಅಧ್ಯಯನ ಪ್ರವಾಸ ಮಾಡುತ್ತೇನೆ. ಕಲಬುರಗಿ ಮತ್ತು ಬೀದರ್ ಭಾಗಕ್ಕೆ ಭೇಟಿ ಕೊಡುತ್ತೇನೆ. ರೈತರ ಸಮಸ್ಯೆ ಆಲಿಸುತ್ತೇನೆ. ಮತ್ತೆ ಅಧಿಕಾರಿಗಳಿಗೂ ಸೂಚನೆ ಕೊಡುತ್ತೇನೆ, ಕಾಟಾಚಾರಕ್ಕೆ ಮಂತ್ರಿಗಳು ಹೋಗಿ ಬಂದಿದ್ದಾರೆ. ಇದೆಲ್ಲದರ ಬಗ್ಗೆ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಆರ್ ಅಶೋಕ್ ಸದಾನಂದಗೌಡರ ನಿವಾಸಕ್ಕೆಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಡಿ.ವಿ.ಸದಾನಂದಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಸದಾನಂದಗೌಡ ಹಲವು ಸಲಹೆ ಕೊಟ್ಟಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಸಹ ಸದಾನಂದಗೌಡ ಜೊತೆ ಮಾತಾಡಿದ್ದಾರೆ.

ಚೆನ್ನಾಗಿ ಕೆಲಸ ಮಾಡಿ ಎಂದು ಡಿ.ವಿ.ಸದಾನಂದಗೌಡ ಹಾರೈಸಿದ್ದಾರೆ ಎಂದರು. ಮಾಜಿ ಸಚಿವ ವಿ.ಸೋಮಣ್ಣ ಉತ್ತಮ ಸ್ನೇಹಿತರಾಗಿರುವ ಕಾರಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಅಶೋಕ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT