ರಾಮನಗರ: ಬಿಜೆಪಿಯವರು ಬ್ರಿಟಿಷ್ ನವರು ಇದ್ದಂತೆ. ಅಮಾಯಕ ಸೈನಿಕರನ್ನ ಬಲಿಕೊಟ್ಟಂತಹ ಕೀರ್ತಿ ಬಿಜೆಪಿಯದ್ದು ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಮಾತನಾಡಿರುವ ಅವರು, ಬಿಜೆಪಿಯವರು ಬ್ರಿಟಿಷರು ಇದ್ದಂತೆ, ಯಾರು ಪ್ರಬಲವಾಗಿರುತ್ತಾರೆ ಅವರ ಮಧ್ಯೆ ಗುಂಪು ಕಟ್ಟಿ ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಾರೆ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಕೆಟಿಆರ್ ಹೇಳಿಕೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ
ದೇಶ ಆಳುವ ವ್ಯಕ್ತಿಗೆ ನಮ್ಮ ಸೈನಿಕರಿಗೆ ತೊಂದರೆ ಇದೆ ಎಂದು ಅವರ ಸರಕಾರಕ್ಕೆ ಹೇಳಲು ಸಾಧ್ಯವಿಲ್ಲ ಎನ್ನುವುದಾದರೆ ಹೇಗೆ?. ಬಲಿದಾನವಾಗಿದ್ದು ಸೈನಿಕರು, ಅಧಿಕಾರ ಬಂದಿದ್ದು ಮೋದಿಗೆ. ಈ ಬಗ್ಗೆ ಜನತೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಮಾರಣ್ಣ ಮಾತೆತ್ತಿದ್ರೆ ನಾವು ಜಾತ್ಯಾತೀತ ಅಂತಾರೆ. ಆದರೆ, ದೇವೇಗೌಡರು ಸಾಯುವ ಕಾಲದಲ್ಲಿ ಕೋಮುವಾದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿಗೆ ಬಂದ ಗತಿ, ಕರ್ನಾಟಕದಲ್ಲಿ ಜೆಡಿಎಸ್'ಗೆ ಬರಲಿದೆ. ಆ ರೀತಿ ಜೆಡಿಎಸ್ ಪಕ್ಷವನ್ನ ಬಿಜೆಪಿಯವರು ಮಾಡದಿದ್ದರೆ, ನಾನು ನನ್ನ ಹೆಸರು ಬದಲಾಯಿಸಿಕೊಳ್ತೀನಿ. ಜೆಡಿಎಸ್ ಎಚ್ಚೆತ್ತುಕೊಳ್ಳದಿದ್ದರೆ ಸಂಪೂರ್ಣ ಅಸ್ಥಿತ್ವವೇ ಮುಗಿಯುತ್ತೆ ಎಂದು ಹೇಳಿದರು.