ರಾಜಕೀಯ

ಸರ್ಕಾರ ಪತನವಾಗಲಿದೆ, ಡಿಕೆಎಸ್ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತ: ಹೆಚ್ ಡಿ ಕುಮಾರಸ್ವಾಮಿ

Manjula VN

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಭಾನುವಾರ ಭವಿಷ್ಯ ನುಡಿದಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿ ಪಕ್ಷದ ಮುಖಂಡರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರದ ಪತನಕ್ಕೆ ಡಿಕೆ ಶಿವಕುಮಾರ್ ಕಾರಣ ಎಂದು ಆರೋಪಿಸಿದರು. ಜೋಡೆತ್ತು ಎಂದು ಬಲವಂತವಾಗಿ ನನ್ನ ಕೈ ಮೇಲೆತ್ತಿ ಒಳಗೊಳಗೆ ರಾಜಕೀಯ ಮಾಡಿ ಸರ್ಕಾರವನ್ನು ಬೀಳಿಸಿದರು. ನಂತರ ಸರ್ಕಾರ ಉಳಿಸಲು ಪ್ರಯತ್ನ ಮಾಡಿದ್ದೇವೆ ಎಂದು ಮೊಸಳೆ ಕಣ್ಣೀರು ಹಾಕಿದರು. ಅವರನ್ನು ನಂಬಿ ಕುತ್ತಿಗೆ ಕೊಯ್ದುಕೊಂಡಿದ್ದೇನೆ. ನಿಮ್ಮ ಕುತ್ತಿಗೆಯನ್ನು ಕೊಯ್ದಿದ್ದೇನೆ ಎಂದರು.

ಸರ್ಕಾರದ ಪಾಪದ ಮಡಕೆ ತುಂಬಿ ತುಳುಕುತ್ತಿದೆ, ಇಂತಹ ಕೆಟ್ಟ ಸರ್ಕಾರವನ್ನು ನಾನು ಎಂದೂ ನೋಡಿಲ್ಲ, ಈ ಸರ್ಕಾರ ಆಂತರಿಕ ಕಲಹದಿಂದ ಕುಸಿದು ಬೀಳಲಿದೆ. 2024 ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ, ಮುಂದೇನಾಗುತ್ತದೆ ಎಂಬುದು ನನಗೆ ಗೊತ್ತಿದೆ, ಆ ಚುನಾವಣೆಯಲ್ಲಿ ಡಿಕೆಶಿ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆಗಳಿಲ್ಲ. ಈಗಾಗಲೇ ಒಮ್ಮೆ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಇದೀಗ ಮತ್ತೆ ಶಾಶ್ವತವಾಗಿ ತಿಹಾರ್ ಜೈಲಿಗೆ ಹೋದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೂ ನನಗೂ ಯಾವುದೇ ವೈಷಮ್ಯ ಇರಲಿಲ್ಲ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ರಾಜಕೀಯಕ್ಕೆ ಡಿಕೆಶಿ ಹಾಕಿದರು. ಇದರ ಪರಿಣಾಮ ಈ ಬ್ಯಾಂಕ್​ ರಾಜಕೀಯಕ್ಕೆ ನಾನು ಬಲಿಪಶುವಾದೆ ಎಂದು ತಿಳಿಸಿದರು.

SCROLL FOR NEXT