ರಾಜಕೀಯ

ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಎಪಿ ಸ್ವಂತ ಬಲದಲ್ಲಿ ಸ್ಪರ್ಧೆ: ಮುಖ್ಯಮಂತ್ರಿ ಚಂದ್ರು

Nagaraja AB

ದಾವಣಗೆರೆ: ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ವಂತ ಬಲದಿಂದ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ತಾಲೂಕ್ ಪಂಚಾಯಿತಿ ಅಥವಾ ಬಿಬಿಎಂಪಿ ಯಾವುದೇ ಚುನಾವಣೆ ಬಂದರೂ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಪಕ್ಷ ಸಂಘಟನೆ ಜೊತೆಯಲ್ಲೇ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡಲಾಗುವುದು, ಕೆಲವು ಕಡೆ ಮೀಸಲಾತಿ ಇರುವುದರಿಂದ ಅದನ್ನೆಲ್ಲಾ ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಪಕ್ಷ ಸಂಘಟನೆಯ ಕಾರ್ಯವನ್ನು ಆರಂಭಿಸಿದ್ದು, ತುಮಕೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಮುಗಿಸಿಕೊಂಡು ದಾವಣಗೆರೆಗೆ ಬಂದಿರುವುದಾಗಿ ಹೇಳಿದ ಮುಖ್ಯಮಂತ್ರಿ ಚಂದ್ರು, ಈ ವರ್ಷಪೂರ್ತಿ ಬಹುತೇಕ ಚುನಾವಣೆ ವರ್ಷವಾಗಿರುವ ಕಾರಣ, ಜನರ ಬಳಿ ನೇರವಾಗಿ ಸಂಪರ್ಕ ಸಾಧಿಸುವ ಮೂಲಕ ಸಂಘಟನೆ ಗಟ್ಟಿಗೊಳಿಸಲು ಪ್ರವಾಸ ಮಾಡುತ್ತಿರುವುದಾಗಿ ತಿಳಿಸಿದರು.

ನಮ್ಮದು ಸಾಮಾನ್ಯ ಜನರ ಪಕ್ಷವಾಗಿದ್ದು 10-15 ಹಳ್ಳಿಗಳ ಜನರನ್ನು ಒಂದು ಕಡೆ ಸೇರಿಸಿ, 'ಬನ್ನಿ ಮಾತಾಡೋಣ, ಎಲ್ಲಾ ಸೇರೋಣ' ಎನ್ನುವ ಘೋಷವಾಕ್ಯ ಇಟ್ಟುಕೊಂಡು, ಜನಗಳ ಜೊತೆಯಲ್ಲಿ ಚರ್ಚೆ ಮಾಡಿ, ನಮ್ಮ ಪಕ್ಷ ದೆಹಲಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. 

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಎಪಿ ರಾಜ್ಯಾಧ್ಯಕ್ಷರು, ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಹಕ್ಕುಗಳನ್ನು ಹತ್ತಿಕ್ಕುವ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ, ರಾ, ಸೇರಿದಂತೆ ಹಲವು ಸಂಸ್ಥೆಗಳನ್ನು ಬಳಸಿಕೊಂಡು ಭಯ ಮೂಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂಗು ಆರೋಪಿಸಿದರು. 

ರಾಜ್ಯ ಸರ್ಕಾರ ಸರಿಯಾದ ಚಿಂತನೆ ಮಾಡದೆ ಉಚಿತ ಭಾಗ್ಯಗಳ ಯೋಜನೆಗಳನ್ನು ಜಾರಿ ಮಾಡಿದೆ. ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ನೂರು ದಿನಗಳಲ್ಲಿ ಹೇಳಿದ್ದನ್ನು ಮಾಡಿದ್ದೇವೆ ಎಂದು ಪ್ರಚಾರ ಮಾಡಿದ್ದಾರೆ, ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೂರು ತಿಂಗಳಿನಿಂದ ಹಣ ಕೊಟ್ಟಿಲ್ಲ ಎಂದು ಆರೋಪಿಸಿದರು. 

SCROLL FOR NEXT