ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆ ಬಂದಾಗ ಮಾತ್ರ ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಸುಳ್ಳಿನ ಭಾಷಣ ಬಿಗಿಯುವ ಪ್ರಧಾನಿಯೇ ಶೋಭಾ ಅವರೇ? ಎಂದು ಪ್ರಶ್ನಿಸಿದೆ.
ಮೋದಿ ಕೇವಲ ಕರ್ನಾಟಕ, ತಮಿಳುನಾಡಿಗೆ ಪ್ರಧಾನಿ ಅಲ್ಲ, ಇತರ ರಾಜ್ಯಗಳ ಜಲ ವಿವಾದಗಳನ್ನೂ ಅವರು ಬಗೆಹರಿಸಬೇಕಿದೆ" ಇದು ಕನ್ನಡಿಗರಿಂದ ಆಯ್ಕೆಯಾದ ಕೇಂದ್ರ ಸಚಿವೆಯೊಬ್ಬರ ಮಾತು. ಕಾವೇರಿ ವಿಚಾರದಲ್ಲಿ ಬಿಜೆಪಿ ಅದೆಷ್ಟು ದುರಹಂಕಾರದ ಧೋರಣೆ ಹೊಂದಿದೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಪ್ರಧಾನಿ ಮೋದಿಗೆ ಫೋಟೋಶೂಟ್ ಮಾಡಿಸುವುದಕ್ಕೆ ಸಮಯ ಸಾಲದು ಸಮಸ್ಯೆ ಬಗೆಹರಿಸಲು ಸಮಯ ಎಲ್ಲಿದೆ ಎನ್ನುವುದು ಈ ಮಾತಿನ ಅರ್ಥವೇ?
ಚುನಾವಣೆ ಬಂದಾಗ ಮಾತ್ರ ಅವರು ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಸುಳ್ಳಿನ ಭಾಷಣ ಬಿಗಿಯುವ ಪ್ರಧಾನಿಯೇ ಶೋಭಾ ಅವರೇ?...ಪ್ರಧಾನಿ ಹುದ್ದೆಯ ಹೊಣೆಗಾರಿಕೆ ರಾಜ್ಯಗಳ ನಡುವಿನ ಸಮಸ್ಯೆ ಬಗೆಹರಿಸುವುದೇ ಹೊರತು ಚುನಾವಣೆ ರೋಡ್ ಶೋಕಿ ಮಾಡುವುದಲ್ಲ ಎಂಬುದರ ಅರಿವು ಮೋದಿಯವರಿಗೂ ಇಲ್ಲ, ಅವರ ಪಕ್ಷದವರಿಗೂ ಇಲ್ಲ ಎಂದು ಹೇಳಿದೆ.