ಯಡಿಯೂರಪ್ಪ
ಯಡಿಯೂರಪ್ಪ 
ರಾಜಕೀಯ

ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ: ಬಿಎಸ್ ಯಡಿಯೂರಪ್ಪ ಭವಿಷ್ಯ

Manjula VN

ಬೆಂಗಳೂರು: ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿ ಅಂತ್ಯವಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮಂಗಳವಾರ ಭವಿಷ್ಯ ನುಡಿದಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಯಡಿಯೂರಪ್ಪ ಅವರು ಚಾಮರಾಜನಗರ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರಿಗೆ 60,000 ಮತಗಳ ಮುನ್ನಡೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಮ್ಮ ತವರು ಕ್ಷೇತ್ರ ವರುಣಾದಲ್ಲಿ ಮತದಾರರಿಗೆ ಕರೆ ನೀಡಿದ್ದನ್ನು ಉಲ್ಲೇಖಿಸಿ ಮಾತನಾಡಿದರು.

ಸಿದ್ದರಾಮಯ್ಯನವರು ತಮ್ಮ ಸಮಯ ಮುಗಿಯುತ್ತಿದೆ ಎಂದು ಅರಿತುಕೊಂಡಿದ್ದಾರೆ. ಹೀಗಾಗಿ ಮತದಾರರಲ್ಲಿ ಇಂತಹ ಮನವಿಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು?. ಯಾರಾದರೂ ಹೇಳುತ್ತಾರಾ, ತಾಕತ್ತಿದೆಯಾ? ಹಣ ಹೆಂಡದ ಮೇಲೆ ತುಘಲಕ್‌ ದರ್ಬಾರ್ ನಡೆಸಿ ಅಧಿಕಾರ ಹಿಡಿಯುವ ಭರವಸೆಯಲ್ಲಿದ್ದಾರೆ. ರಾಜ್ಯದ ಉದ್ದಗಲಕ್ಕೆ ನಾವೆಲ್ಲಾ ಹಿರಿಯ ಮುಖಂಡರ ಜತೆ ವಿಧಾನಸಭಾ ಕ್ಷೇತ್ರಗಳಿಗೆ ಬಂದು ಕಾರ್ಯಕರ್ತರ ಸಭೆ ನಡೆಸಲಿದ್ದೇವೆ. ಈ ಬಾರಿ 28 ಕ್ಷೇತ್ರ ಗೆದ್ದು ದೆಹಲಿಗೆ ಆ 28 ಸದಸ್ಯರನ್ನು ಕರೆದುಕೊಂಡು ಬರುತ್ತೇನೆ ಎಂದು ಅಮಿತ್ ಶಾ ಅವರಿಗೆ ಭರವಸೆ ನೀಡಿದರು.

ಮೋದಿ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ. ನಾವೆಲ್ಲಾ ಒಟ್ಟಾಗಿ ಒಂದಾಗಿ ಕೆಲಸ ಮಾಡೋಣ. ರಾಜ್ಯ ಪ್ರವಾಸ ಮಾಡುತ್ತೇನೆ,‌ 82 ವರ್ಷವಾದರೂ ಮನೆ ಸೇರುವ ಪ್ರಶ್ನೆಯೇ ಇಲ್ಲ. ತುಘಲಕ್ ಸರ್ಕಾರವನ್ನು ಜನರಿಗೆ ತಿಳಿಸೋಣ. ಎಲ್ಲಿ ಕರೆಯುತ್ತೀರೋ ಅಲ್ಲಿಗೆ ಬರಲಿದ್ದೇನೆ. ಈ ಸರ್ಕಾರ ಮಾಡಿದ ಅನ್ಯಾಯವನ್ನು ವಿವರಿಸೋಣ. ಚುನಾವಣೆ ಮುಗಿಯುವವರೆಗೂ ಮನೆ ಸೇರಲ್ಲ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಿದರೆ ನಮಗೆ ಗೆಲುವು ಕಷ್ಟವಲ್ಲ, ಮಾದರಿ ರಾಜ್ಯವಾಗಿ ಮಾಡಲು ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.

SCROLL FOR NEXT