ಪ್ರಜ್ವಲ್ ರೇವಣ್ಣ - ಪ್ರೀತಂ ಗೌಡ
ಪ್ರಜ್ವಲ್ ರೇವಣ್ಣ - ಪ್ರೀತಂ ಗೌಡ 
ರಾಜಕೀಯ

ಹಾಸನದಲ್ಲಿ NDA ಅಭ್ಯರ್ಥಿ ಪರ ಪ್ರೀತಂ ಗೌಡ ಪ್ರಚಾರ; ಪ್ರಜ್ವಲ್ ರೇವಣ್ಣ ಹೆಸರೇಳದೆಯೇ ಮತಯಾಚನೆ!

Ramyashree GN

ಮೈಸೂರು: ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಬುಧವಾರ ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಹೆಸರೇಳದೆಯೇ ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಮೂಲಕ ಮತಯಾಚಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದನ್ನು ಪ್ರೀತಂ ವಿರೋಧಿಸಿದ್ದರು. ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ವೇಳೆ ಗೈರು ಹಾಜರಾಗಿದ್ದ ಅವರು, ಮೈತ್ರಿ ಅಭ್ಯರ್ಥಿ ಪರ ಪ್ರಚಾರದಿಂದ ದೂರ ಉಳಿದಿದ್ದರು.

ಈ ಬಗ್ಗೆ ಜೆಡಿಎಸ್ ಮುಖಂಡರ ದೂರುಗಳ ನಂತರ, ಲೋಕಸಭೆ ಚುನಾವಣೆಯ ಬಿಜೆಪಿಯ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ಹಾಸನ ಮತ್ತು ಮೈಸೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ತುರ್ತು ಸಮನ್ವಯ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು.

ಹಾಸನದಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಪ್ರೀತಂ ಗೌಡ ಅವರಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಚುನಾವಣಾ ಉಸ್ತುವಾರಿ ನೀಡಲಾಗಿದೆ. ಹಾಸನದತ್ತಲೂ ಗಮನ ಹರಿಸಬೇಕು ಎಂದು ಪಕ್ಷದ ಮುಖಂಡರಿಂದ ಸೂಚನೆ ಬಳಿಕ ಹಾಸನದಲ್ಲಿಯೂ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ನಡೆಸಿ ಹೈಕಮಾಂಡ್‌ ಸೂಚನೆ ಪಾಲಿಸುವುದಾಗಿ ಭರವಸೆ ನೀಡಿದರು.

ಅದರಂತೆ ಬುಧವಾರ ಹಾಸನದಲ್ಲಿ ಪ್ರಚಾರ ಕೈಗೊಂಡು ಎನ್‌ಡಿಎ ಅಭ್ಯರ್ಥಿ ಪರ ಮತ ಯಾಚಿಸಿ, ಮೋದಿ ಸರ್ಕಾರದ 10 ವರ್ಷಗಳ ಸಾಧನೆ ಸಾರುವ ಕರಪತ್ರಗಳನ್ನು ಹಂಚಿದ್ದಾರೆ. ಕರಪತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಹೆಸರೇ ಇರಲಿಲ್ಲ. ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್‌ನ ಹೆಸರಿಲ್ಲದೆಯೇ ಎನ್‌ಡಿಎ ಅಭ್ಯರ್ಥಿ ಪರ ಮತ ಯಾಚಿಸಿದ್ದಾರೆ.

ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪ್ರೀತಂ ಗೌಡ, ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು, ತಮ್ಮ ಬೆಂಬಲಿಗರು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ ಎಂದಿದ್ದರು.

SCROLL FOR NEXT