ಬಿ.ಕೆ ಹರಿಪ್ರಸಾದ್ 
ರಾಜಕೀಯ

ಬಿಜೆಪಿಯದ್ದು ಚುನಾವಣಾ ಪ್ರಣಾಳಿಕೆ ಅಲ್ಲ, ಅದೊಂದು ಸುಳ್ಳಿನ ಘೋಷಣಾ ಪತ್ರ: ಬಿ.ಕೆ ಹರಿಪ್ರಸಾದ್

ಪ್ರಣಾಳಿಕೆಗಳು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವಂತಿರಬೇಕೇ ಹೊರತು, ಮತ್ತಷ್ಟು ದಿವಾಳಿ ಮಾಡುವಂತಿರಬಾರದು ಎಂಬ ಕನಿಷ್ಟ ತಿಳುವಳಿಕೆಯೂ ಬಿಜೆಪಿ ಪಕ್ಷಕ್ಕೆ ಇದ್ದಂತಿಲ್ಲ.

ಬೆಂಗಳೂರು: ಪ್ರಣಾಳಿಕೆಗಳು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವಂತಿರಬೇಕೇ ಹೊರತು, ಮತ್ತಷ್ಟು ದಿವಾಳಿ ಮಾಡುವಂತಿರಬಾರದು ಎಂಬ ಕನಿಷ್ಟ ತಿಳುವಳಿಕೆಯೂ ಬಿಜೆಪಿ ಪಕ್ಷಕ್ಕೆ ಇದ್ದಂತಿಲ್ಲ. ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವುದು ಚುನಾವಣಾ ಪ್ರಣಾಳಿಕೆ ಅಲ್ಲ,ಅದೊಂದು "ಸುಳ್ಳಿನ ಘೋಷಣಾ" ಪತ್ರ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಕ್ಷ ಇತಿಹಾಸದಲ್ಲೇ ಕ್ರಾಂತಿಕಾರಿ ಪ್ರಣಾಳಿಕೆಯನ್ನು ಘೋಷಿಸಿದೆ. ಕಾಂಗ್ರೆಸ್ ಪ್ರಣಾಳಿಕೆ ಎದುರು ಬಿಜೆಪಿಯ ಪ್ರಣಾಳಿಕೆ ಸರಿಸಾಟಿಯೇ ಇಲ್ಲ ಎಂಬುದನ್ನು ತಜ್ಞರು ಮಾತ್ರವಲ್ಲ, ದೇಶದ ಸಾಮಾನ್ಯ ಜನರೇ ಮಾತಾಡುವಂತಾಗಿದೆ. ಅದಕ್ಕೆ ಈ ಹತ್ತು ಕಾರಣಗಳೇ ಸಾಕು ಎಂದಿದ್ದಾರೆ.

1. ಜನರ ಧ್ವನಿಯಾಗಲು

ಕಾಂಗ್ರೆಸ್:- ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ನಂತರ, ದೇಶದ ಜನರ ಸಮಸ್ಯೆಗಳ ಅಂಶಗಳನ್ನೇ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಬಿಜೆಪಿ:- ಪ್ರಣಾಳಿಕೆಯನ್ನು ಮೋದಿಯವರ ಹೊಗಳಿಕೆಗೆ ಮೀಸಲಿಟ್ಟಿರುವುದು ದುರಂತ. 69, ಬಾರಿ ಮೋದಿಯ ಜಪ, 53 ಬಾರಿ ಮೋದಿಯ ವರ್ಣನೆ ಮಾಡಲಾಗಿದೆ.

2. ದೇಶದ ಜ್ವಲಂತ ಸಮಸ್ಯೆಯ ಪರಿಹಾರಕ್ಕಾಗಿ

ಕಾಂಗ್ರೆಸ್:- ದೇಶದ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರದ ಬಗ್ಗೆ ಗಮನ ಹರಿಸಿದೆ.

ಬಿಜೆಪಿ:- ನಿರುದ್ಯೋಗ ಹಾಗೂ ಬೆಲೆ ಏರಿಕೆಯ ಬಗ್ಗೆ ಚಕಾರ ಎತ್ತಿಲ್ಲ.

3. ನೈಜ ಪರಿಹಾರ

ಕಾಂಗ್ರೆಸ್:- ಉದ್ಯೋಗ ಸೃಷ್ಟಿಗಾಗಿ ನಿರ್ಧಿಷ್ಟ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

ಬಿಜೆಪಿ:-ಹೊಸ ಯೋಜನೆಗಳಿಗೆ ಒತ್ತು ನೀಡದೆ, ಹಳೆಯ ಯೋಜನೆಗಳನ್ನೇ ಪುನರಾವರ್ತನೆ ಮಾಡಲಾಗಿದೆ.

4. ಉತ್ತಮ ಆಡಳಿತಕ್ಕಾಗಿ

ಕಾಂಗ್ರೆಸ್:- ಗ್ಯಾರೆಂಟಿಗಳ ಅನುಷ್ಠಾನ ಸೇರಿದಂತೆ ಪಾರದರ್ಶಕವಾಗಿ ಆಡಳಿತ ನಡೆಸಲು ಸ್ವಷ್ಟವಾದ ಮಾರ್ಗಸೂಚಿ ರೂಪಿಸಲಾಗಿದೆ.

ಬಿಜೆಪಿ:- ಯಾವ ಅಂಶಗಳನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬ ಕಣ್ಣೋಟವೇ ಇಲ್ಲ.

5. ರೈತರಿಗೆ ಬೆಂಬಲ ಬೆಲೆ

ಕಾಂಗ್ರೆಸ್:- ಸ್ವಾಮೀನಾಥನ್ ಆಯೋಗದ ಪ್ರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ.

ಬಿಜೆಪಿ:-ಕಾಲ ಕಾಲಕ್ಕೆ ರೈತರಿಗೆ ಬೆಂಬಲ ಬೆಲೆ ನೀಡಲಾಗುವುದು.

6. ಮಹಿಳಾ ಸಬಲೀಕರಣ

ಕಾಂಗ್ರೆಸ್:- ಎಲ್ಲಾ ಮಹಿಳೆಯರ ಖಾತೆಗಳಿಗೆ ವರ್ಷಕ್ಕೆ ಒಂದು ಲಕ್ಷ ಹಣ ನೀಡುವುದು.

ಬಿಜೆಪಿ:- ಕುಟುಂಬದವ ಆದಾಯವನ್ನೇ ಪರಿಗಣಿಸಿ "ಲಕ್ಷಪತಿ ದೀದಿ" ಎಂದು ಘೋಷಿಸುತ್ತಾರೆ.

7. ಯುವಜನತೆಗೆ ಉದ್ಯೋಗ

ಕಾಂಗ್ರೆಸ್:- 30 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ. ವರ್ಷಕ್ಕೆ ಒಂದು ಲಕ್ಷ ಯುವಜನತೆಗೆ ನಿರುದ್ಯೋಗ ಭತ್ಯೆ. ಉದ್ಯೋಗ ಸೃಷ್ಟಿಸಲು ಒತ್ತು ನೀಡುವುದು.

ಬಿಜೆಪಿ:- ಉದ್ಯೋಗ ಸೃಷ್ಟಿಸಲು ಯಾವುದೇ ನೀತಿಯೂ ಇಲ್ಲ, ಯೊಜನೆಯೂ ಇಲ್ಲ.

8. ಕಾರ್ಮಿಕರ ಆದಾಯ ಹೆಚ್ಚಳ

ಕಾಂಗ್ರೆಸ್:- ಕಾರ್ಮಿಕರ ದಿನದ ಆದಾಯ 400 ರೂಗೆ ಹೆಚ್ಚಳ, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಜಾರಿಗೆ ಕ್ರಮ.

ಬಿಜೆಪಿ:- ಕಾರ್ಮಿಕರ ಕನಿಷ್ಠ ವೇತನವನ್ನು ಕಾಲ ಕಾಲ ಪರಿಶೀಲನೆ ನಡೆಸಲಾಗುವುದು.

9. ಸಾಮಾಜಿಕ ನ್ಯಾಯ

ಕಾಂಗ್ರೆಸ್:- ಸಾಮಾಜಿಕ ನ್ಯಾಯವೇ ಕಾಂಗ್ರೆಸ್ ಪಕ್ಷದ ಬದ್ದತೆಯಾಗಿದ್ದು, ನಿರಂತರವಾಗಿ ಪಾಲಿಸಲಾಗುವುದು.

ಬಿಜೆಪಿ:-ಸಮಾನತೆಯ ಬಗ್ಗೆ ಚಕಾರವೇ ಎತ್ತಿಲ್ಲ.

10. ಭರವಸೆಯ ಯೋಜನೆಗಳ ಘೋಷಣೆ

ಕಾಂಗ್ರೆಸ್:- ತಿಂಗಳುಗಳ ಕಾಲ ಸುಧೀರ್ಘ ಚರ್ಚೆ ನಡೆಸಲಾಗಿದ್ದು, ಹಲವು ಸಂಶೋಧನೆಗಳು ಹಾಗೂ ತಜ್ಞರೊಂದಿಗಿನ ಮಹತ್ವದ ಚರ್ಚೆಗಳ ನಂತರ ಘೋಷಿಸಲಾಗಿದೆ.

ಬಿಜೆಪಿ:- ಕೇವಲ ಹದಿನೈದು ದಿನಗಳ ತರಾತುರಿಯಲ್ಲಿ ಪ್ರಣಾಳಿಕೆ ಸಮಿತಿ ರಚನೆ ಮಾಡಿ ಘೋಷಿಸಲಾಗಿದೆ.

ದೇಶದ ಜನರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸ್ವಾಗತಿಸುತ್ತಿದ್ದಾರೆ, ಚರ್ಚೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಪೂರ್ವಪರ ಇಲ್ಲದ, ದೂರದೃಷ್ಟಿಯೇ ಇಲ್ಲದ ಬಿಜೆಪಿಯ ಪ್ರಣಾಳಿಕೆಗೆ ಯಾವುದೇ ಪ್ರತಿಕ್ರಿಯೆ ಬರದೆ ಇರುವುದು ಬಿಜೆಪಿಯ ಮೇಲೆ ಜನರು ನಂಬಿಕೆ ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT