ಪಿ ಸಿ ಮೋಹನ್
ಪಿ ಸಿ ಮೋಹನ್ 
ರಾಜಕೀಯ

ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರ: ಹ್ಯಾಟ್ರಿಕ್ ವೀರನಿಗೆ ಕಾಂಗ್ರೆಸ್ ಬ್ರೇಕ್? ಪಿಸಿ ಮೋಹನ್ ಪಾಸಿಟಿವ್ ಅಂಶಗಳೇನು? (ಸಂದರ್ಶನ)

Shilpa D

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಜತೆಗೆ ಜೆಡಿಎಸ್‌ ಮೈತ್ರಿಯ ಎನ್‌ಡಿಎ ಅಭ್ಯರ್ಥಿಯಾಗಿ ಪಿಸಿ ಮೋಹನ್‌ ಸತತ ನಾಲ್ಕನೇ ಗೆಲುವಿಗೆ ಬಿರುಸಿನ ಪ್ರಚಾರ ನಡೆಸಿದ್ದಾರೆ. 'ಐಎನ್‌ಡಿಐಎ' ಮೈತ್ರಿ ಕೂಟದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚೊಚ್ಚಲ ಚುನಾವಣೆ ಎದುರಿಸುತ್ತಿರುವ ಮನ್ಸೂರ್‌ ಅಲಿ ಖಾನ್‌ ನೇರ ಹಣಾಹಣಿಗೆ ಸಿದ್ದರಾಗಿದ್ದಾರೆ. ಇದೇ ವೇಳೆ ಎನ್ ಡಿ ಅಭ್ಯರ್ಥಿ ಪಿ ಸಿ ಮೋಹನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗಿ ಸಂದರ್ಶನದಲ್ಲಿ ತಮ್ಮ ಪ್ರಚಾರದ ಬಗ್ಗೆ ಮಾತನಾಡಿದ್ದಾರೆ.

ಪ್ರಚಾರದ ವೇಳೆ ಪ್ರತಿಕ್ರಿಯೆ ಹೇಗಿದೆ?

ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಕಳೆದ ಎರಡು ತಿಂಗಳಿಂದ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳು ಅವರಿಗೆ ತಲುಪಿದೆಯೇ, ಇಲ್ಲದಿದ್ದರೆ ಹೇಗೆ ಮಾಡಬೇಕು ಎಂದು ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ಹೆಚ್ಚಿನ ಮಂದಿ ಪ್ರಯೋಜನ ಪಡೆದಿದ್ದು, ಜನರು ಸಂತಸಗೊಂಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ, ನಾನು ಕೆರೆ ಪುನರುಜ್ಜೀವನ, ನೀರಿನ ಮರು ಬಳಕೆ, ಮುಂದಿನ 40 ತಿಂಗಳಲ್ಲಿ ಉಪನಗರ ರೈಲು ಯೋಜನೆ ಪೂರ್ಣಗೊಳಿಸುವುದು ಹಾಗೂ ಮೆಟ್ರೋ ರೈಲು ಜಾಲದ ವಿಸ್ತರಣೆಗೆ ಒತ್ತು ನೀಡಲು ಬಯಸುತ್ತೇನೆ.

ತನ್ನ ಭರವಸೆಗಳು ಜನರನ್ನು ತಲುಪಿದ್ದು ಗೆಲುವಿಗೆ ಖಾತರಿ ಯೋಜನೆಗಳು ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ಹೇಳಿದೆಯಲ್ಲ?

ಕಾಂಗ್ರೆಸ್ ಭರವಸೆಗಳ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಅದೊಂದು ರಾಜಕೀಯ ಗಿಮಿಕ್. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದ ನಂತರ 200 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವವರಿಗೆ ಮಾತ್ರ ನೀಡುವಂತೆ ಷರತ್ತು ಹಾಕಿದರು. ವಿದ್ಯುತ್ ದರವನ್ನೂ ಹೆಚ್ಚಿಸಿದರು. ಕುಟುಂಬದ ಎಲ್ಲ ಮಹಿಳಾ ಮುಖ್ಯಸ್ಥರಿಗೆ 2,000 ರೂಪಾಯಿ ನೀಡುವ ಭರವಸೆಯನ್ನೂ ಅವರು ಈಡೇರಿಸಿಲ್ಲ. ಕೆಲವರಿಗೆ ಮಾತ್ರ ಸಿಕ್ಕಿದೆ. ಬಿಜೆಪಿಗೆ ಮೋದಿ ಹೆಸರೇ ಗ್ಯಾರಂಟಿ. ಜನರು ಸರ್ಕಾರದ ಕಾರ್ಯಕ್ಷಮತೆಯನ್ನು ನೋಡುತ್ತಾರೆ. ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲುತ್ತೇವೆ. ಇಡೀ ದೇಶದಲ್ಲಿ ಕಾಂಗ್ರೆಸ್ 25 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ.

ಮೋದಿ ಹೆಸರಿನಲ್ಲಿ ಅಭ್ಯರ್ಥಿಗಳು ಮತ ಕೇಳುತ್ತಾರೆ, ತಮ್ಮ ಸಾಧನೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ಆರೋಪವಿದೆಯಲ್ಲ?

ಹೌದು, ನಾನು ಹೆಮ್ಮೆಯಿಂದ ಮೋದಿಜಿಯವರ ಹೆಸರನ್ನು ತೆಗೆದುಕೊಂಡು ಮತ ಕೇಳುತ್ತೇನೆ. ಕಳೆದ 10 ವರ್ಷಗಳಲ್ಲಿ ನಾವು ಬೆಂಗಳೂರು ಸಂಸದರು ಕೇಂದ್ರದಿಂದ ಉಪನಗರ ರೈಲು ಮತ್ತು ಮೆಟ್ರೋ ರೈಲಿಗೆ 1,30,00 ಕೋಟಿ ರೂ. ಹಾಗೂ ನನ್ನ ಕ್ಷೇತ್ರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ 1000 ಕೋಟಿ ರೂ.ಗಳ ಅನುದಾನ ಪಡೆದುಕೊಂಡು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಜನರು ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ ಮತ್ತು ನಾಲ್ಕನೇ ಬಾರಿಗೆ ಸ್ಪರ್ಧಿಸಲು ನನಗೆ ಟಿಕೆಟ್ ಸಿಕ್ಕಿದೆ. ನಾನು ಮೋದಿಜಿಯವರ ಹೆಸರು ಹಾಗೂ ನಾನು ಮಾಡಿದ ಕೆಲಸಗಳಿಗಾಗಿ ಮತ ಕೇಳುತ್ತೇನೆ. ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಲು ಕಾಂಗ್ರೆಸ್ ನಾಯಕರು ನಾಚಿಕೆಪಡುತ್ತಿದ್ದಾರೆ.

ತೆರಿಗೆ ಹಂಚಿಕೆ ಮತ್ತು ಬರ ಪರಿಹಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಬಿಜೆಪಿ ಸಂಸದರು ದನಿ ಎತ್ತುವುದಿಲ್ಲ ಎಂದು ದೂರುಗಳು ಕೇಳಿಬರುತ್ತಿವೆಯಲ್ಲ?

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮಹದೇವಪುರ ಅತಿ ಹೆಚ್ಚು ತೆರಿಗೆ ನೀಡಿ ರಫ್ತಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ, ಆದರೆ ನೀವು ನೀಡುತ್ತಿರುವ ನಿಧಿಯ ಪಾಲು ಎಷ್ಟು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೇಳಲು ಬಯಸುತ್ತೇನೆ? ಚಿಕ್ಕಪೇಟೆ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುತ್ತದೆ, ಅದರ ಅಭಿವೃದ್ಧಿಗೆ ಎಷ್ಟು ಹಣ ನೀಡಲಾಗುತ್ತಿದೆ? ಉತ್ತಮ ರಸ್ತೆಗಳಿಲ್ಲ. ನಿಮ್ಮ ರಾಜ್ಯದಲ್ಲಿ ನಿಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದಿರುವಾಗ, ನೀವು ಕೇಂದ್ರವನ್ನು ಏಕೆ ಪ್ರಶ್ನಿಸುತ್ತೀರಿ?

ತೆರಿಗೆ ಹಂಚಿಕೆಯ ನಿರ್ಧಾರವನ್ನು ಬಹಳ ಹಿಂದೆಯೇ ತೆಗೆದುಕೊಳ್ಳಲಾಗಿತ್ತು, ಆ ವೇಳೆ ಅವರು ಸಮಾಲೋಚನೆಯ ಭಾಗವಾಗಿದ್ದರು. ಇದು ಇಡೀ ದೇಶಕ್ಕೆ ಒಂದೇ. ಬರ ಪರಿಹಾರ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ನಿಯಮಾನುಸಾರ ನೀಡಲಾಗುವುದು. ಅವರು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಅದರ ಬಗ್ಗೆ ಜನರಿಗೆ ಅರಿವಿದೆ ಎಂದು ಪಿ ಸಿ ಮೋಹನ್ ಹೇಳಿದ್ದಾರೆ.

SCROLL FOR NEXT