ರಾಜಕೀಯ

ನನ್ನ ದೇಹದಲ್ಲಿರುವುದು ನಮ್ಮಪ್ಪನ ಡಿಎನ್ಎ; ಶೆಟ್ಟರ್ ಬೇರೆ, ಸವದಿ ಬೇರೆ; ಬಿಜೆಪಿಗೆ ವಾಪಸ್ ಹೋಗಲು ನನಗೇನು ಹುಚ್ಚಾ?

Shilpa D

ಬೆಳಗಾವಿ: ಜಗದೀಶ್ ಶೆಟ್ಟರ್ ಬಿಜೆಪಿ ಮರು ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಂಚಲನ ಶುರುವಾಗಿದೆ. ಶೆಟ್ಟರ್ ಬೆನ್ನಲ್ಲೇ ಬಿಜೆಪಿಯಿಂದ ಬಂದಿದ್ದ ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್‌ನಿಂದ ಮತ್ತೆ ಬಿಜೆಪಿಗೆ ವಾಪಸ್ ಹೋಗುತ್ತಾರೆ ಎಂಬ ವದಂತಿ ಹರಿದಾಡುತ್ತಿದೆ. ಈ ಎಲ್ಲಾ ಊಹಾ ಪೋಹಕ್ಕೆ ಸವದಿ ಉತ್ತರ ನೀಡಿದ್ದಾರೆ.

ಜಗದೀಶ್ ಶೆಟ್ಟರ್‌ ಅಂತೆ ನೀವೂ ಕೂಡ ಬಿಜೆಪಿಗೆ ವಾಪಸ್ ಹೋಗ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ ಸವದಿ, ನಾನು ಮೊದಲು ಬಂದಿದ್ದು,  ಆಮೇಲೆ ಅವರು ಬಂದ್ರು,  ಹೋದ್ರು ಎಂದಿದ್ದಾರೆ. ನಾನ್ಯಾಕೆ ಕಾಂಗ್ರೆಸ್ ಬಿಟ್ಟು, ಮತ್ತೆ ಬಿಜೆಪಿಗೆ ಹೋಗಬೇಕು. ಅವ್ರ ವಿಚಾರ ಅವರಿಗೆ, ನಮ್ಮ ವಿಚಾರ ನಮಗೆ. ಜಗದೀಶ್ ಶೆಟ್ಟರ್ ಹಾದಿ ಎಲ್ಲರೂ ತುಳಿಯಬೇಕಾ? ಅಂತ ಸವದಿ ಪ್ರಶ್ನಿಸಿದ್ದಾರೆ. ನನಗೆ ಅವತ್ತು ಆಗಿರೋ ನೋವನ್ನು ನಾನು ಸಹಿಸಿಕೊಂಡು ಇದ್ದು, ಕೊನೆಗೆ ಅನಿವಾರ್ಯವಾಗಿ ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಬೇಕಾಯ್ತು ಅಂತ ತಮ್ಮ ಪಕ್ಷಾಂತರದ ಕಾರಣ ಬಿಚ್ಚಿಟ್ಟರು.

ಕಾಂಗ್ರೆಸ್ ನನ್ನನ್ನು ಗೌರವದಿಂದ ಬರ ಮಾಡಿಕೊಂಡಿದೆ. ನನಗೆ ಆಶ್ರಯ ನೀಡಿದೆ ಅಂತ ಸವದಿ ಹೇಳಿದ್ರು. ಸಿಎಂ, ಡಿಸಿಎಂ ಆಗಿರಬಹುದು ಎಲ್ಲರೂ ಗೌರವದಿಂದ ನಡೆಸಿಕೊಳ್ತಿದ್ದಾರೆ. ಇಂತ ಹೊತ್ತಲ್ಲಿ ಈ ಪಾರ್ಟಿ ಬಿಟ್ಟು ಬೇರೆ ಕಡೆ ಹೋಗೋದಕ್ಕೆ ನನಗೇನು ಹುಚ್ಚು ಹಿಡಿದಿದೆಯಾ? ಅಂತ ಅವರು ಪ್ರಶ್ನಿಸಿದ್ದಾರೆ.

ಲಕ್ಷ್ಮಣ ಸವದಿ ಮೈಯಲ್ಲಿ ಬಿಜೆಪಿ ಡಿಎನ್‌ಎ ಇದೆ ಅಂತ ಬಿಜೆಪಿ ನಾಯಕರು ಹೇಳ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಂದೆ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ಬೇರೆ ಯಾವುದೋ ಡಿಎನ್‌ಎ ತಂದು ನನಗೆ ಹಚ್ಚೋಕೆ ಬರಬೇಡಿ ಅಂತ ಖಾರವಾಗಿ ಹೇಳಿದ್ದಾರೆ.

ತಮ್ಮ ಜನ್ಮದಿನದ ಶುಭಾಶಯ ಕೋರಲು ಬೆಳಗಾವಿಯ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಾದ ಕಾಂಗ್ರೆಸ್ ಪಕ್ಷದ ಚಿಹ್ನೆಗಳಿಲ್ಲದ ಬ್ಯಾನರ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ಅವರು ತಮ್ಮ ಜನ್ಮದಿನವನ್ನು ಎಂದಿಗೂ ಆಚರಿಸಲಿಲ್ಲ ಆದರೆ ಅವರ ಹಲವಾರು ಬೆಂಬಲಿಗರಿಗೆ ಬೇಡವೆಂದು ಮನವಿ ಮಾಡಿದ್ದರೂ ಬ್ಯಾನರ್‌ಗಳನ್ನು ಹಾಕಿದರು. ಬ್ಯಾನರ್‌ನಲ್ಲಿ ಪಕ್ಷದ ಚಿಹ್ನೆ ಇಲ್ಲದಿದ್ದರೆ ಅನಗತ್ಯ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

SCROLL FOR NEXT