ರಾಜಕೀಯ

ಕಮ್ಯುನಿಸ್ಟರಿಗೆ ಶ್ರೀ ರಾಮ ಬೇಕಾಗಿಲ್ಲ, ಅವರಿಗೆ ಕೊಲೆಗಾರ ಬೇಕು: ಬಸನಗೌಡ ಪಾಟೀಲ್ ಯತ್ನಾಳ್

Ramyashree GN

ಬೆಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಆಹ್ವಾನವನ್ನು ಸಿಪಿಐ(ಎಂ) ತಿರಸ್ಕರಿಸಿದ್ದು, ಕಮ್ಯುನಿಸ್ಟರಿಗೆ ಕೇವಲ 'ಕೊಲೆಗಾರ ಬೇಕು' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ವಾಗ್ದಾಳಿ ನಡೆಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಮ ಜನ್ಮಭೂಮಿಯ ಉದ್ಘಾಟನೆಗೆ ನೀಡಿದ ಆಮಂತ್ರಣವನ್ನು ಸಾರಾಸಗಟಾಗಿ ತಿರಸ್ಕರಿಸಿದ ಕಮ್ಮುನಿಸ್ಟ್ ಪಕ್ಷವು, ಸುಮಾರು ನಾಲ್ಕು ಕೋಟಿಗೂ ಹೆಚ್ಚು ಜನರನ್ನು ದಾರುಣವಾಗಿ ಕೊಂದ ನಿರಂಕುಶ ಪ್ರಭುತ್ವವಾದಿ ಮಾವೋ ಝಡೊನ್ಗ್ ಅವರ ಜಯಂತಿ ನೆನಪಿನಾರ್ಥವಾಗಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಕಮ್ಯುನಿಷ್ಟರಿಗೆ ಶ್ರೀ ರಾಮ ದೇವರು ಬೇಕಿಲ್ಲ, ಆದರೆ ಒಬ್ಬ ಕೊಲೆಪಾತಕ ಬೇಕು' ಎಂದಿದ್ದಾರೆ.

ಅವರು ಸಿಪಿಐ(ಎಂ)ನ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ. 

'ಮಹಾನ್ ಕ್ರಾಂತಿಕಾರಿ ಮಾವೋ ಅವರ ಜನ್ಮ ವಾರ್ಷಿಕೋತ್ಸವದಂದು ನಾವು ನಮಸ್ಕರಿಸುತ್ತೇವೆ. ಅವರ ನಾಯಕತ್ವದಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷ ಮತ್ತು ಚೀನಾದ ಜನರು ಜನರ ಪ್ರಜಾಪ್ರಭುತ್ವ ಕ್ರಾಂತಿಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು' ಎಂದು ಸಿಪಿಐ(ಎಂ) ಟ್ವೀಟ್ ಮಾಡಿದೆ.

ಕಳೆದ ತಿಂಗಳ ಕೊನೆಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಬಹು ನಿರೀಕ್ಷಿತ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು.

'ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ಬಂದಿದೆ. ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯನ್ನು ಮುಂದುವರಿಸುವ ಹಕ್ಕುಗಳನ್ನು ಕಾಪಾಡುವುದು ಪಕ್ಷದ ನೀತಿಯಾಗಿದೆ' ಎಂದು ಪಕ್ಷವು ಡಿಸೆಂಬರ್ 26, 2023 ರಂದು ಹೇಳಿಕೆಯಲ್ಲಿ ತಿಳಿಸಿದೆ.

'ಧರ್ಮವು ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ರಾಜಕೀಯ ಲಾಭಕ್ಕಾಗಿ ಸಾಧನವಾಗಿ ಪರಿವರ್ತಿಸಬಾರದು ಎಂದು ಅದು ನಂಬುತ್ತದೆ. ಆದ್ದರಿಂದ, ನಾವು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ' ಎಂದು ಅದು ಸೇರಿಸಿದೆ.

SCROLL FOR NEXT