ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾರವಾರದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಪೊಲೀಸರು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳವಾರ ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಹೆಗಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಆದರೆ, ಹೆಗ್ಗಡೆಯವರ ಬಂಧನ ಸಾಧ್ಯತೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಅಂತಹ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ ಎಂದರು.
“ಪೊಲೀಸರು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದ್ದಾರೆ. ಸಂಸದರನ್ನು ಬಂಧಿಸಬೇಕೋ ಬೇಡವೋ ಎಂಬುದು ಪೊಲೀಸರ ವಿವೇಚನೆಗೆ ಬಿಟ್ಟ ವಿಚಾರ. ಒಬ್ಬ ವ್ಯಕ್ತಿಯನ್ನು ಬಂಧಿಸಲು ಅಥವಾ ಬಿಡುಗಡೆ ಮಾಡಲು ನಾನು ಮಧ್ಯಪ್ರವೇಶಿಸುವುದಿಲ್ಲ ಮತ್ತು ಅವರಿಗೆ ನಿರ್ದೇಶನ ನೀಡುವುದಿಲ್ಲ. ಹೆಗಡೆ ಅವರ ಮೇಲೆ ಹೊರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೆಕ್ಷನ್ಗಳಲ್ಲಿ ನಿಬಂಧನೆ ಇದ್ದರೆ ಸ್ಥಳೀಯ ಪೊಲೀಸರು ಅವರು ಬಂಧಿಸುತ್ತಾರೆ. ಪರಿಣಾಮಗಳು ಏನೇ ಇರಲಿ, ಅದು ಪೊಲೀಸರ ನಿರ್ಧಾರವಾಗಿರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯನವರೇ ಸಂಸ್ಕೃತಿ, ಸಭ್ಯತೆ ಬಗ್ಗೆ ಮಾತನಾಡುವುದಾದರೆ ನನ್ನ ಎದುರು ಬಂದು ಮಾತಾಡಿ': ಅನಂತ್ ಕುಮಾರ್ ಹೆಗಡೆ
ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ. ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಗಡೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಸಿದ್ದರಾಮಯ್ಯ ನೀವು ಬರಲಿ, ಬಿಡಲಿ, ರಾಮ ಮಂದಿರ ಉದ್ಘಾಟನೆ ನಿಲ್ಲುವುದಿಲ್ಲ ಮಗನೆ ಎಂದಿದ್ದರು.
ಸಿಎಂ ವಿರುದ್ಧ ಹೆಗಡೆ ಅವಹೇಳನಕಾರಿ ಹೇಳಿಕೆಯಿಂದ ಕರ್ನಾಟಕ ಬಿಜೆಪಿ ಘಟಕ ಅಂತರ ಕಾಯ್ದುಕೊಂಡಿದೆ. ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಹೆಗಡೆ, ಸಭ್ಯತೆ ಮತ್ತು ಸಂಸ್ಕೃತಿಯ ವಿಷಯಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿಎಂ ಬರಲಿ ಎಂದು ಸವಾಲು ಹಾಕಿದ್ದಾರೆ.