ಬೆಂಗಳೂರು: ರಾಜ್ಯದಲ್ಲಿ ಮುಡಾ ಹಗರಣ, ಮಹರ್ಷಿ ವಾಲ್ಮೀಕಿ ನಿಗಮ ಹಗರಣಗಳ ಮಧ್ಯೆ ಮುಂಗಾರು ಅಧಿವೇಶನ ನಡೆಯುತ್ತಿದೆ. ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿರುವುದರ ಮಧ್ಯೆ ಸರ್ಕಾರದ ಸಿಎಂ ಬದಲಾವಣೆ ವಿಚಾರ ಕೂಡ ಸದ್ದು ಮಾಡುತ್ತಿದೆ.
ಇಂತಹ ವಿದ್ಯಮಾನಗಳ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂದಿನ ಮಂಗಳವಾರ ಜುಲೈ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಮತ್ತು ಇತರ ಹಿರಿಯ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕೇಳಿಬರುತ್ತಿರುವ ಹಗರಣಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡು ಹಗರಣಗಳ ಆರೋಪಗಳು ಒಂಬತ್ತು ದಿನಗಳ ಸಂಪೂರ್ಣ ಮುಂಗಾರು ಅಧಿವೇಶನವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಂಪೂರ್ಣ ನುಂಗಿಹಾಕಿದೆ.
ಈ ಎರಡು ವಿಚಾರಗಳು ಕಾಂಗ್ರೆಸ್ಗೆ ಸದ್ಯಕ್ಕೆ ಹಿನ್ನಡೆಯಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಕೆಲವೇ ದಿನಗಳಲ್ಲಿ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುವ ಬಿಜೆಪಿಯ ಯೋಜನೆ ಕಾಂಗ್ರೆಸ್ಗೆ ಮತ್ತಷ್ಟು ಹೊಡೆತ ಬೀಳಬಹುದು. ಈ ಹಗರಣಗಳು ಮತ್ತು ಇತರ ಸಮಸ್ಯೆಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ರಾಜ್ಯ ಸರ್ಕಾರದ ನಾಯಕರು ವಿಧಾನಮಂಡಲದ ಅಧಿವೇಶನದ ಉದ್ದಕ್ಕೂ ಸಮರ್ಥನೆಗೆ ನಿಂತಿರುವುದು ಕಂಡುಬಂತು.
ದೆಹಲಿಗೆ ತೆರಳುವ ಮುನ್ನ ಬರುವ ಸೋಮವಾರ ಜುಲೈ 29ರಂದು ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಕಾವೇರಿ ನದಿಗೆ ‘ಬಾಗಿನ’ ಅರ್ಪಿಸಲಿದ್ದಾರೆ. ಅದರಲ್ಲಿ ಜಿಲ್ಲೆಯ ಸಚಿವರು ಮತ್ತು ಇತರ ಕೆಲವು ನಾಯಕರು ಭಾಗವಹಿಸಲಿದ್ದಾರೆ.
ಇಂದು ಸಚಿವ ಸಂಪುಟ ಸಭೆ ಸಾಧ್ಯತೆ: ಈ ಮಧ್ಯೆ, ಇಂದು ಸಚಿವ ಸಂಪುಟ ಸಭೆ ಸೇರಿ ಅಗತ್ಯ ವಿಷಯಗಳನ್ನು ಚರ್ಚೆ ಮಾಡುವ ನಿರೀಕ್ಷೆಯಿದೆ, ವಾಲ್ಮೀಕಿ ಮತ್ತು ಮುಡಾ ಸಮಸ್ಯೆಗಳ ಬಗ್ಗೆ ಸಚಿವರುಗಳು ಅನೌಪಚಾರಿಕವಾಗಿ ಚರ್ಚಿಸಿ ಸಮಸ್ಯೆಗಳಿಗೆ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆಯಿದೆ. ಸಿಎಂ ಮತ್ತು ಮಂತ್ರಿಗಳು ತಮ್ಮ ವೈಯಕ್ತಿಕ ಸಿಬ್ಬಂದಿ ಮತ್ತು ಬೆಂಬಲಿಗರು ಇಲ್ಲದೆ ಭೇಟಿಯಾಗುವ ಏಕೈಕ ಸ್ಥಳವೆಂದರೆ ಸಚಿವ ಸಂಪುಟ ಸಭೆ ಆಗಿರಬಹುದು, ಅಂದರೆ ಇಲ್ಲಿ ಗೌಪ್ಯತೆಯ ವಿಚಾರಗಳು ಮುಖ್ಯವಾಗಿ ಚರ್ಚೆಗೆ ಬರುತ್ತವೆ.
ವಿಧಾನಮಂಡಲ ಅಧಿವೇಶನ ಇಂದಿನವರೆಗೆ ನಡೆಸಲು ಆರಂಭದಲ್ಲಿ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಅಧಿವೇಶನವನ್ನು ನಿನ್ನೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಪರಿಣಾಮಕಾರಿಯಾಗದಿದ್ದರೆ ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣ ವಿಷಯವನ್ನು ರಾಜ್ಯ ಬಿಜೆಪಿ ನಾಯಕರು ಮತ್ತು ಸಂಸದರು ದೆಹಲಿಗೆ ತೆಗೆದುಕೊಂಡು ಹೋಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಒತ್ತಾಯಿಸಲೂಬಹುದು ಎಂದು ಹೇಳಲಾಗುತ್ತಿದೆ. ರಾಷ್ಟ್ರಪತಿಗಳು ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಲೂಬಹುದು ಎಂದು ಉನ್ನತ ಮೂಲಗಳು ಹೇಳುತ್ತಿವೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಲ್ಮೀಕಿ ಮತ್ತು ಮುಡಾ ಹಗರಣ ವಿಚಾರಗಳ ಕುರಿತು ಕಳೆದ ಕೆಲವು ದಿನಗಳಿಂದ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಅವರಿಗೆ ಬೆಂಬಲವಾಗಿ ಸಂಸದ ಜಗದೀಶ್ ಶೆಟ್ಟರ್, ಈಗ ಕೇಂದ್ರ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ಕೂಡ ಇದ್ದಾರೆ.