ಸಿ.ಟಿ.ರವಿ.
ಸಿ.ಟಿ.ರವಿ. 
ರಾಜಕೀಯ

ಜಾತಿ ಗಣತಿ ವರದಿ ಹಿಂದೂಗಳನ್ನು ವಿಭಜಿಸುವ ಕಾಂಗ್ರೆಸ್'ನ ಟೂಲ್‌ಕಿಟ್‌ ಭಾಗ: ಸಿ.ಟಿ.ರವಿ

Manjula VN

ಮೈಸೂರು: ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿ ಗಣತಿ ವರದಿಯು ಹಿಂದೂಗಳನ್ನು ವಿಭಜಿಸುವ ಕಾಂಗ್ರೆಸ್'ನ ಟೂಲ್‌ಕಿಟ್‌ ಭಾಗವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನ್ಯಾಯಮೂರ್ತಿ ಎಚ್.ಕಾಂತರಾಜ್ ಮತ್ತು ಕೆ.ಜಯಪ್ರಕಾಶ್ ಹೆಡ್ಗೆ ಇಬ್ಬರೂ ಕಾಂಗ್ರೆಸ್ ಪಾಳಯದಿಂದ ಬಂದವರು, ಲೋಕಸಭೆ ಚುನಾವಣೆಗೂ ಮುನ್ನ ಹಿಂದೂ ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸಲು ವರದಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಕೃಪಾಪೋಷಿತ ಮಂಡಳಿ ನೀಡಿರುವ ಜಾತಿ ಗಣತಿ ವರದಿ ಇದಾಗಿದ್ದು, ಜಾತಿ ಜಾತಿ ನಡುವೆ ಎತ್ತಿಕಟ್ಟಲು ಈ ವರದಿ ಸಿದ್ಧ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಮಗುವಿನ ತೊಟ್ಟಿಲು ತೂಗೋ ಕೆಲಸ ಮತ್ತು ಚಿವುಟೋ ಕೆಲಸ ಎರಡು ಮಾಡುತ್ತಿದೆ. ವರದಿ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಒಬ್ಬೊಬ್ಬರದು ಒಂದೊಂದು ನಿಲುವು. ವರದಿ ವಿಚಾರದಲ್ಲಿ ಸಿಎಂ ನಡೆ ಒಪ್ಪದವರು ರಾಜೀನಾಮೆ ಕೊಟ್ಟು ಬರಲಿ. ಅದನ್ನು ಬಿಟ್ಟು ನಾಟಕ ಆಡಬೇಡಿ. ವರದಿ ವಿಚಾರದಲ್ಲಿ ಕಾಂಗ್ರೆಸ್ ಹಗಲು ವೇಷ ಹಾಕಿಕೊಂಡು ಡ್ರಾಮಾ ಮಾಡುತ್ತಿದೆ ಎಂದು ಕಿಡಿಕಾರಿದರು.

ಆಯೋಗದ ವರದಿ ಪ್ರಕಾರ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲಿದ್ದಾರೆಂದು ತಿಳಿದುಬದಿದೆ. ಹೀಗಾಗಿ ಮುಸ್ಲಿಮರಿಗೆ ನೀಡಿರುವ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಸೌಲಭ್ಯಗಳನ್ನು ಹಿಂಪಡೆಯಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡಸಿರುವುದಕ್ಕೆ ಪ್ರತಿಕ್ರಿಯಿಸಿ, ಕುಣಿಯಲಾರದವಳು ನೆಲ ಡೋಂಕು ಎಂದಳ್ಳಂತೆ ಎಂಬ ಸ್ಥಿತಿ ರಾಜ್ಯ ಸರಕಾರದ್ದು. ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಬೆರಳು ತೋರುತ್ತಿದ್ದು ಜನರು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸಿದ್ದರಾಮಯ್ಯ ಟೋಪಿ ಹಾಕುವುದರಲ್ಲಿ ತೋರಿಸುವ ಆಸಕ್ತಿ ಕುಂಕುಮ ಹಾಕೋಕೆ ತೋರಿಸಲ್ಲ. ಅನ್ನಭಾಗ್ಯ ಯೋಜನೆಯಲ್ಲಿ 1 ಕೆ ಜಿ ಅಕ್ಕಿಯನ್ನು ಕೊಟ್ಟಿಲ್ಲ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಉಪುಡಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಅಭಿಯಾನ ಕುರಿತು ಪ್ರತಿಕ್ರಿಯಿಸಿ, ನಾನು ಆ ಕ್ಷೇತ್ರದ ಆಕಾಂಕ್ಷಿಯಲ್ಲ. ಹೀಗಾಗಿ ಅಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಗೆ ನಾನು ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದರು.

SCROLL FOR NEXT