ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. 
ರಾಜಕೀಯ

ಲೋಕಸಭೆ ಚುನಾವಣೆ: 20 ವರ್ಷಗಳ ನಂತರ ರಾಜಕೀಯ ಸ್ಪರ್ಧಾಕಣದಲ್ಲಿ ಮೈಸೂರು ಒಡೆಯರ್ ರಾಜವಂಶಸ್ಥ!

Sumana Upadhyaya

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಕರ್ನಾಟಕದ 20 ಕ್ಷೇತ್ರ ಸೇರಿದಂತೆ ದೇಶಾದ್ಯಂತ 72 ಅಭ್ಯರ್ಥಿಗಳ ಘೋಷಣೆಯಾಗಿದೆ.

ಬಿಜೆಪಿಯ ಅಭ್ಯರ್ಥಿಗಳ ಘೋಷಣೆಯಲ್ಲಿ ತೀವ್ರ ಚರ್ಚೆ, ವಿರೋಧ, ಅಸಮಾಧಾನಕ್ಕೆ ಗ್ರಾಸವಾಗಿದ್ದು ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮತ್ತು ಚಾಮರಾಜನಗರ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹೈಕಮಾಂಡ್ ರಣತಂತ್ರ ರೂಪಿಸಿದೆ. ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರವು ಈ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳುವ ಪಕ್ಷದ ಉದ್ದೇಶವನ್ನು ಸೂಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಹೊಸ ನಾಯಕರನ್ನು ಹುಟ್ಟುಹಾಕುವ ತಂತ್ರವನ್ನು ಸಾರುತ್ತದೆ ಎನ್ನಬಹುದು.

ಸಾಕಷ್ಟು ಊಹಾಪೋಹಗಳು ಮತ್ತು ಗೊಂದಲಗಳ ನಡುವೆ, ಮೈಸೂರು-ಕೊಡಗಿನ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮೈಸೂರು ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ದಾರಿ ಮಾಡಿಕೊಟ್ಟಿದೆ. ಅವರ ಉಮೇದುವಾರಿಕೆಯು ಸುಮಾರು ಎರಡು ದಶಕಗಳ ನಂತರ ಮೈಸೂರು ರಾಜಮನೆತನದ ಸದಸ್ಯರ ರಾಜಕೀಯ ಪ್ರವೇಶವನ್ನು ಸೂಚಿಸುತ್ತದೆ. ಈ ಕ್ರಮವನ್ನು ಕಾರ್ಯತಂತ್ರವೆಂದು ಪರಿಗಣಿಸಲಾಗಿದ್ದು, ಪಕ್ಷದ ಮುಖಂಡರು ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ನೆಲದಲ್ಲಿ ಗೆಲುವು ಸಾಧಿಸುವ ಅವಕಾಶವೆಂದು ಪರಿಗಣಿಸಿದ್ದಾರೆ.

1999 ರಿಂದ 2004 ರವರೆಗೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ 4 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಂತರ ಒಡೆಯರ್ ಕುಟುಂಬದಿಂದ ರಾಜಕೀಯಕ್ಕೆ ಯಾರೂ ಪ್ರವೇಶಿಸಿರಲಿಲ್ಲ. ಇದೀಗ ಯದುವೀರ್ ಅವರ ರಾಜಕೀಯ ಪ್ರವೇಶವು ಮಹತ್ವದ ಕ್ಷಣವಾಗಿದೆ. ಇದೀಗ ಮತ್ತೆ ರಾಜಮನೆತನದ ರಾಜಕೀಯ ಪ್ರವೇಶ ಸಹಜವಾಗಿ ಮೈಸೂರು ಜನತೆಯಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಕ್ಷೇತ್ರದಿಂದ ಇನ್ನೊಬ್ಬ ಯುವ ನಾಯಕರ ಹೊರಹೊಮ್ಮುವಿಕೆ ಮೇಲೆ ಜನತೆ ಅಪಾರ ನಿರೀಕ್ಷೆ ಮತ್ತು ಭರವಸೆಯನ್ನು ಇರಿಸಿಕೊಂಡಿದ್ದಾರೆ.

ಇದೀಗ ಪ್ರತಾಪ ಸಿಂಹ ಅವರಿಗೆ ಟಿಕೆಟ್ ನೀಡದೆ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡುವ ಮೂಲಕ ಉಂಟಾಗಿರುವ ಭಿನ್ನಾಭಿಪ್ರಾಯದ ಹೊತ್ತಿನಲ್ಲಿ ಬಿಜೆಪಿ ಗೆಲ್ಲಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ತಮಗೆ ಟಿಕೆಟ್ ಕೈತಪ್ಪುತ್ತಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಭಾವೋದ್ರಿಕ್ತರಾಗಿ ಮಾತನಾಡಿದ್ದ ಪ್ರತಾಪ್ ಸಿಂಹ ನಿನ್ನೆ ಟಿಕೆಟ್ ಘೋಷಣೆಯಾದ ಕೂಡಲೇ ಕ್ಷೇತ್ರದ ಕಾರ್ಯಕರ್ತರು ಎಲ್ಲಾ ಒಟ್ಟಾಗಿ ಈ ಬಾರಿ ದೇಶಕ್ಕಾಗಿ ಮೋದಿಗಾಗಿ ಯದುವೀರ್ ಒಡೆಯರ್ ಅವರನ್ನು ಗೆಲ್ಲಿಸಿ ಸಂಸತ್ ಗೆ ಕಳುಹಿಸೋಣ ಎಂದು ಹೇಳಿರುವುದು ಪಕ್ಷದ ನಾಯಕರು ಅವರನ್ನು ಸಮಾಧಾನಪಡಿಸಿದಂತಿದೆ.

ಇನ್ನು ಚಾಮರಾಜನಗರ (ಎಸ್‌ಸಿ ಮೀಸಲು ಕ್ಷೇತ್ರ)ದಲ್ಲಿ ವಂಶಾಡಳಿತ ರಾಜಕಾರಣವನ್ನು ತೊರೆದು ಬಿಜೆಪಿ ಈ ಬಾರಿ ದಿಟ್ಟ ಹೆಜ್ಜೆ ಇಟ್ಟಿದೆ. ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯಂದಿರಾದ ಹರ್ಷವರ್ಧನ್ ಮತ್ತು ಡಾ.ಮೋಹನ್ ಅವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಶಾಸಕ ಎಸ್.ಬಾಲರಾಜ್ ಅವರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರವು ಸಾಂಪ್ರದಾಯಿಕ ರಾಜಕೀಯ ತಂತ್ರಗಳಿಂದ ನಿರ್ಗಮನವನ್ನು ಎತ್ತಿ ತೋರಿಸುತ್ತದೆ. ಬಾಲರಾಜ್ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸ್ಥಳಾಂತರಗೊಂಡಿರುವುದು ಈ ಪ್ರದೇಶದಲ್ಲಿ ತನ್ನ ನೆಲೆಯನ್ನು ಬಲಪಡಿಸುವ ಪಕ್ಷದ ಪ್ರಯತ್ನಗಳನ್ನು ಒತ್ತಿಹೇಳುತ್ತದೆ.

SCROLL FOR NEXT