ಯದುವೀರ್ ಒಡೆಯರ್
ಯದುವೀರ್ ಒಡೆಯರ್ 
ರಾಜಕೀಯ

ಕೊಡಗಿನಲ್ಲಿ ಮಾನವ-ಪ್ರಾಣಿ ಸಂಘರ್ಷ ಪರಿಹರಿಸಲು ನನ್ನ ಅನುಭವ ಬಳಸಿಕೊಳ್ಳುತ್ತೇನೆ: ಯದುವೀರ್ ಒಡೆಯರ್

Lingaraj Badiger

ಮಡಿಕೇರಿ: “ಕೊಡಗು ತನ್ನ ಪ್ರಕೃತಿ, ಪರಿಸರ ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಜಿಲ್ಲೆಯ ಸಾವಯವ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಮೂಲಕ ನಾನು ಎಲ್ಲವನ್ನೂ ಗೌರವಿಸುತ್ತೇನೆ ಎಂದು ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಮಡಿಕೇರಿಯಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯದುವೀರ್ ಅವರು, ಬಾಲ್ಯದಲ್ಲಿ ನಾಗರಹೊಳೆ ಸೇರಿದಂತೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿರುವುದರಿಂದ ಕೊಡಗಿನ ಜೊತೆಗೆ ವಿಶೇಷ ಬಾಂಧವ್ಯವಿದೆ ಎಂದರು.

“ನನಗೆ ಬಾಲ್ಯದಿಂದಲೂ ಈ ಜಿಲ್ಲೆಯೊಂದಿಗೆ ವಿಶೇಷವಾದ ಭಾವನಾತ್ಮಕ ಸಂಬಂಧವಿದೆ. ಇಲ್ಲಿನ ಜನರ ಸೇವೆ ಮಾಡುವುದು ನನ್ನ ಭಾಗ್ಯವೆಂದು ಭಾವಿಸುತ್ತೇನೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.

ತಾವೊಬ್ಬ ವನ್ಯಜೀವಿ ಪ್ರೇಮಿ ಎಂದ ಯದುವೀರ್, ಜಿಲ್ಲೆಯಲ್ಲಿನ ಮಾನವ-ಪ್ರಾಣಿ ಸಂಘರ್ಷವನ್ನು ಪರಿಹರಿಸಲು ತಮ್ಮ ಅನುಭವ ಬಳಸಿಕೊಳ್ಳುವುದಾಗಿ ಭರವಸೆ ನೀಡಿದರು.

ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ತಾವು ರಾಜಕೀಯಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಸಂಸದರಾಗಿ ಆಯ್ಕೆಯಾದರೆ ಅಗತ್ಯವಿದ್ದಾಗ ಸಾರ್ವಜನಿಕರಿಗೆ ಲಭ್ಯವಾಗುವ ಭರವಸೆ ನೀಡಿದರು. ಯದುವೀರ್ ರಾಜವಂಶಸ್ಥರು, ಅವರು ಸಾಮಾನ್ಯ ಜನರ ಕೈಗೆ ಸಿಗುತ್ತಾರೆಯೇ ಎನ್ನುವ ಅನುಮಾನವನ್ನು ಈಗಾಗಲೇ ಜನರು ವ್ಯಕ್ತಪಡಿಸುತ್ತಿದ್ದಾರೆ.

"ನಾನು ಈ ಹಿಂದೆಯೇ ರಾಜಕೀಯಕ್ಕೆ ಸೇರುವ ಯೋಚನೆ ಹೊಂದಿದ್ದೆ. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ರಾಜಕೀಯಕ್ಕೆ ಬರಬೇಕು. ಪ್ರತಿಯೊಬ್ಬರಿಗೂ ಅವರವರ ವೃತ್ತಿ ಮಾರ್ಗಗಳನ್ನು ನಿರ್ಧರಿಸುವ ಹಕ್ಕಿದೆ ಮತ್ತು ನಾನು ಉತ್ತಮ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕಾಫಿ ತೋಟಗಳು, ಮೆಣಸು ಮತ್ತು ಕಿತ್ತಳೆ ತೋಟಗಳನ್ನು ಆರ್ಥಿಕ ರೀತಿಯಲ್ಲಿ ಹೆಚ್ಚು ಅಭಿವೃದ್ಧಿಪಡಿಸುವುದಾಗಿ ಮತ್ತು ಜಿಲ್ಲೆಯ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ಭರವಸೆ ನೀಡಿದರು.

SCROLL FOR NEXT