ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್ಪಿ ಮುದ್ದಹನುಮೇಗೌಡ ಅವರು ತುಮಕೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಚಿತ್ರದುರ್ಗ ಮತ್ತು ದಾವಣಗೆರೆಯ ಮಠಗಳಿಗೆ ಭೇಟಿ ನೀಡಿದ್ದು, ಈ ಮೂಲಕ ತಮ್ಮ ಪ್ರತಿಸ್ಪರ್ಧಿ ಸೋಮಣ್ಣ ಅವರಿಕೆ ಕೌಂಟರ್ ನೀಡಿದ್ದಾರೆ.
ವಿ.ಸೋಮಣ್ಣ ಅವರು ಇತ್ತೀಚೆಗೆ ಆದಿಚುಂಚನಗಿರಿ, ಸಿದ್ಧಗಂಗಾ ಮಠ ಸೇರಿದಂತೆ ಹಲವು ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದು, ಇದಕ್ಕೆ ಕೌಂಟರ್ ಎಂಬಂತೆ ಮುದ್ದ ಹನುಮೇಗೌಡ ಕೂಡ ಮಠಗಳತ್ತ ಚಿತ್ತ ಹರಿಸಿದ್ದಾರೆ.
ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ, ಸ್ವಾಮೀಜಿಗಳ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಮಾದಿಗ ಸಮುದಾಯದ ಮಾದಾರ ಚನ್ನಯ್ಯ, ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಬಂಜಾರ, ಭೋವಿ, ಯಾದವ ಸಮುದಾಯದ ಪ್ರಮುಖರ ಆಶೀರ್ವಾದ ಪಡೆದುಕೊಂಡರು.
ಮೊದಲಿಗೆ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಮುದ್ದ ಹನುಮೇಗೌಡ ಅವರು, ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಆಶೀರ್ವಾದ ಪಡೆದರು. ನಂತರ ವೀರಶೈವ ಲಿಂಗಾಯತ ಸಿದ್ದಗಂಗಾ ಮಠದ ಮುಖ್ಯಸ್ಥ ಶ್ರೀ ಸಿದ್ದಲಿಂಗ ಸ್ವಾಮಿಗಳನ್ನು ಭೇಟಿ ಮಾಡಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಪ್ರತಿನಿಧಿಸುವ ಧಾರ್ಮಿಕ ಮುಖ್ಯಸ್ಥರು ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಈ ಧಾರ್ಮಿಕ ಮುಖಂಡರ ಒಂದು ಮಾತು ಫಲಿತಾಂಶದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಹೀಗಾಗಿಯೇ ರಾಜಕೀಯ ನಾಯಕರು ಧಾರ್ಮಿಕ ಮುಖಂಡರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ.