ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ 
ರಾಜಕೀಯ

ಮಂಡ್ಯದಿಂದ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಹತ್ವದ ಹೇಳಿಕೆ...

Ramyashree GN

ಬೆಂಗಳೂರು: 'ನಿನ್ನೆ ಮೂರು ಲೋಕಸಭಾ ಕ್ಷೇತ್ರಗಳು ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಹಾಸನ, ಕೋಲಾರ, ಮಂಡ್ಯ ಕ್ಷೇತ್ರಗಳು ನಮಗೆ ಸಿಕ್ಕಿವೆ' ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಂಡ್ಯದ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಜೆಪಿ ನಗರದ ಮನೆಗೆ ಆಗಮಿಸಿದ್ದರು. ನನ್ನ ತಂದೆ ಎಚ್‌ಡಿ ಕುಮಾರಸ್ವಾಮಿ ಈಗಷ್ಟೇ ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಬಂದಿದ್ದಾರೆ. ಅವರಿಗೆ ಮೂರನೇ ಬಾರಿಗೆ ಹೃದಯದ ಶಸ್ತ್ರಚಿಕಿತ್ಸೆಯಾಗಿದೆ. ಹಾಗಾಗಿ ಅವರು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ, ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ನಾವು ಅನೇಕ ಮಾತುಕತೆಗಳನ್ನು ನಡೆಸಿದ್ದೇವೆ ಎಂದರು.

ಮಂಡ್ಯದಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕು ಎಂಬುದು ಎಲ್ಲರ ಅಭಿಪ್ರಾಯ. ಆದರೆ, ಈಬಗ್ಗೆ ನಿರ್ಧಾರ ಕೈಗೊಳ್ಳಲು ಸರಿಯಾದ ವ್ಯಕ್ತಿಗಳೆಂದರೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. 2019 ಲೋಕಸಭಾ ಚುನಾವಣಾ ಫಲಿತಾಂಶ ಜೆಡಿಎಸ್‌ಗೆ ಕಷ್ಟಕರವಾಗಿತ್ತು. ಹಾಗಾಗಿ, ಈ ಬಾರಿಯಾದರೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂದು ಕಾರ್ಯಕರ್ತರು ಬಯಸಿದ್ದಾರೆ. ಮಂಡ್ಯದ 8 ವಿಧಾನಸಭೆ ಕ್ಷೇತ್ರದಿಂದಲೂ ಕಾರ್ಯಕರ್ತರು ಬಂದಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರವಾಗಲಿದೆ. ನಾಳೆ ಅಥವಾ ನಾಡಿದ್ದು ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ನಾನು ಕೂಡ ಪಕ್ಷದ ಕಾರ್ಯಕರ್ತನಾಗಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಂತಿಮ ನಿರ್ಧಾರ ಕುಮಾರಸ್ವಾಮಿ ಮತ್ತು ದೇವೇಗೌಡ ಅವರದ್ದೇ ಆಗಿರುತ್ತದೆ. 18 ಲೋಕಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚಿನ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರಿದ್ದಾರೆ. ಅವರೆಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದ್ದಾರೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಲೆಂದು ನಾವು ಬಯಸುತ್ತೇವೆ ಎಂದರು.

SCROLL FOR NEXT