ಸುಮಲತಾ ಅಂಬರೀಶ್, ಬಿ.ವೈ. ವಿಜಯೇಂದ್ರ
ಸುಮಲತಾ ಅಂಬರೀಶ್, ಬಿ.ವೈ. ವಿಜಯೇಂದ್ರ 
ರಾಜಕೀಯ

ಮಂಡ್ಯದಲ್ಲಿಯೇ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ: ವಿಜಯೇಂದ್ರ ಭೇಟಿ ಬಳಿಕ ಸುಮಲತಾ ಅಂಬರೀಶ್

Nagaraja AB

ಬೆಂಗಳೂರು: ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿ ಟಿಕೆಟ್ ವಂಚಿತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಮನವೊಲಿಕೆ ಕಾರ್ಯ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಜೆಪಿ ನಗರದಲ್ಲಿರುವ ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸುವ ಮೂಲಕ ಅವರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನಾಳೆ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ತಮ್ಮ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದೇನೆ. ವಿಜಯೇಂದ್ರ ತಮ್ಮ ಅಭಿಪ್ರಾಯ ಮತ್ತು ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ನನಗೂ ಜಿಲ್ಲೆ ಮತ್ತು ಚುನಾವಣೆಯ ಬಗ್ಗೆ ಇರುವ ಕಾಳಜಿಯನ್ನು ಹೇಳಿದ್ದೇನೆ. ನಾನು ಬಿಜೆಪಿಯಲ್ಲೇ ಇರಬೇಕೆಂದು ಬಯಸಿದ್ದರಿಂದ ಪಕ್ಷ ಸೇರುವಂತೆ ಕೇಳಿಕೊಂಡರು. ನನ್ನ ಬೆಂಬಲಿಗರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರ ನಿರೀಕ್ಷೆ ಮತ್ತು ಅಭಿಪ್ರಾಯಗಳನ್ನು ಆಲಿಸುವುದು ನನ್ನ ಕರ್ತವ್ಯ. ಮಂಡ್ಯದಲ್ಲಿಯೇ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರ ಬಿಟ್ಟು ಕೊಡುವ ಬದಲು ತನಗಾಗಿಯೇ ಉಳಿಸಿಕೊಳ್ಳಬೇಕಿತ್ತು ಎಂದು ಪುನರುಚ್ಚರಿಸಿದ ಸುಮಲತಾ, ಈಗಾಗಲೇ ಮುಗಿದಿರುವ ವಿಷಯಗಳನ್ನು ಚರ್ಚಿಸಲು ಯಾವುದೇ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ತನ್ನ ನಿಲುವನ್ನು ಖಂಡಿತವಾಗಿ ಬಹಿರಂಗಪಡಿಸುತ್ತೇನೆ ಎಂದರು. ಇದೇ ವೇಳೆ ಕುಮಾರಸ್ವಾಮಿ ಭೇಟಿ ಮಾಡಲು ಇಚ್ಛಿಸಿರುವ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಅವರನ್ನು ಭೇಟಿ ಮಾಡಲು ನನ್ನ ಅಭ್ಯಂತರವಿಲ್ಲ ಎಂದು ಹೇಳಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ , ತಮ್ಮ ಮನವಿಗೆ ಸುಮಲತಾ ಸ್ಪಂದಿಸಿದ್ದಾರೆ. ಆದರೆ, ತನ್ನ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದಾರೆ."ಅವರು ನಮ್ಮೊಂದಿಗೆ ಉಳಿದು ನಮ್ಮ ಪಕ್ಷವನ್ನು ಬಲಪಡಿಸುತ್ತಾರೆ ಎಂಬ ದೃಢ ನಂಬಿಕೆ ನನಗಿದೆ. ಇದು ಅವರ ಸೋಲು ಎಂದು ಭಾವಿಸಬಹುದು ಆದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿರುವುದಾಗಿ ತಿಳಿಸಿದರು.

SCROLL FOR NEXT