ಕ್ಯಾಪ್ಟನ್ ಬ್ರಿಜೇಶ್ ಚೌಟಾ - ಪದ್ಮರಾಜ್ ಆರ್
ಕ್ಯಾಪ್ಟನ್ ಬ್ರಿಜೇಶ್ ಚೌಟಾ - ಪದ್ಮರಾಜ್ ಆರ್ 
ರಾಜಕೀಯ

ದಕ್ಷಿಣ ಕನ್ನಡ: ಹಿಂದುತ್ವದ ಭದ್ರಕೋಟೆಯಲ್ಲಿ ಕಾಂಗ್ರೆಸ್- ಬಿಜೆಪಿ ರಣತಂತ್ರ; ಮತದಾರರು ಮಣೆ ಹಾಕುವುದು ಯಾರಿಗೆ?

Ramyashree GN

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಕಳೆದ ಕೆಲವು ದಶಕಗಳಿಂದ ಎಂ ವೀರಪ್ಪ ಮೊಯ್ಲಿ, ಡಿವಿ ಸದಾನಂದ ಗೌಡ, ಬಿ ಜನಾರ್ದನ ಪೂಜಾರಿ ಮುಂತಾದ ಅನೇಕ ಹಿರಿಯ ರಾಜಕಾರಣಿಗಳ ಹೋರಾಟವನ್ನು ಕಂಡಿದೆ. ಆದರೆ, 2024ರ ಲೋಕಸಭೆ ಚುನಾವಣೆ ವೇಳೆಗೆ ಈ ವಾತಾವರಣ ಸಂಪೂರ್ಣ ವಿಭಿನ್ನವಾಗಿದೆ.

ಬಿಜೆಪಿ ಅಭ್ಯರ್ಥಿಯಾದಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್ ಪದ್ಮರಾಜ್ ಮೊದಲ ಬಾರಿಗೆ ಚುನಾವಣೆಯ ಪರೀಕ್ಷೆ ಎದುರಿಸುತ್ತಿದ್ದಾರೆ. ಹೆಚ್ಚು ಸಾಕ್ಷರ, ಆದರೆ ಕೋಮು ಧ್ರುವೀಕೃತ ಮತದಾರರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಚಿಕ್ಕ ವಯಸ್ಸಿನವರಾಗಿದ್ದು, ವಿದ್ಯಾವಂತರಾಗಿದ್ದಾರೆ. ಕ್ಲೀನ್ ಇಮೇಜ್ ಹೊಂದಿದ್ದು, ಯಾವುದೇ ರಾಜಕೀಯ ಹಿನ್ನೆಲೆಯನ್ನು ಹೊಂದಿಲ್ಲ.

ಕಳೆದ ಬಾರಿ 1989ರಲ್ಲಿ ಇಲ್ಲಿಂದ ಕಾಂಗ್ರೆಸ್ ಗೆದ್ದಿದ್ದು, ಬಿ ಜನಾರ್ದನ ಪೂಜಾರಿ ನಾಲ್ಕನೇ ಬಾರಿ ಗೆದ್ದಿದ್ದರು. 1991ರಲ್ಲಿ ಬಿಜೆಪಿ ಈ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿತು ಮತ್ತು ನಂತರ ಅದು ಹಿಂತಿರುಗಿ ನೋಡಿಯೇ ಇಲ್ಲ. ರಾಮ ರಥ ಯಾತ್ರೆಯು ಇಲ್ಲಿ ಬಿಜೆಪಿಯ ರಾಜಕೀಯ ಭವಿಷ್ಯವನ್ನೇ ಬದಲಿಸಿದೆ ಮತ್ತು ಪ್ರತಿ ಚುನಾವಣೆಯಲ್ಲೂ ಪಕ್ಷವು ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2019ರಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 2.73 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರಲ್ಲಿ ಎಂಟು ಶಾಸಕರ ಪೈಕಿ ಏಳು ಶಾಸಕರು ಕಾಂಗ್ರೆಸ್‌ನವರಾಗಿದ್ದಾಗಲೂ ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಬಿಜೆಪಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ, ಕೇಸರಿ ಪಕ್ಷದ ಭದ್ರಕೋಟೆಯನ್ನು ಭೇದಿಸಲು ಕಾಂಗ್ರೆಸ್ ಶ್ರಮಿಸುತ್ತಿದೆ. ಮೂರು ಬಾರಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸುವ ಮೂಲಕ ಕೇಸರಿ ಪಕ್ಷವು ಪಕ್ಷದೊಳಗಿನ ಅಸಮಾಧಾನ ಮತ್ತು ಮತದಾರರಲ್ಲಿನ ಆಡಳಿತ ವಿರೋಧಿ ಅಲೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ.

ಎರಡೂ ರಾಷ್ಟ್ರೀಯ ಪಕ್ಷಗಳು ಮತದಾರರನ್ನು ಗೆಲ್ಲಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿವೆ. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ಮತ್ತು ಹಿಂದುತ್ವದ ಮೇಲೆ ಮತದಾರರ ಮನವೊಲಿಸುವಲ್ಲಿ ಮುಂದಾಗಿದೆ. ಚೌಟ ಅವರು ಈ ಚುನಾವಣೆಯಲ್ಲಿ ಗೆಲ್ಲಲು ಅಭಿವೃದ್ಧಿ ಮತ್ತು ಹಿಂದುತ್ವವನ್ನೇ ತಮ್ಮ ಮಂತ್ರವನ್ನಾಗಿಸಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಕ್ಷೇತ್ರವು 1 ಲಕ್ಷ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ನ ಭರವಸೆಗಳು ರಾಜ್ಯದ ಆರ್ಥಿಕತೆಯನ್ನು ಹಾಳುಮಾಡಿವೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಮತ್ತೊಂದೆಡೆ, ಬಿಲ್ಲವ ಸಮುದಾಯದ ವಕೀಲ ಪದ್ಮರಾಜ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಕ್ಷೇತ್ರದಲ್ಲಿ ಸಂಖ್ಯಾ ಬಲವಿರುವ ಸಮುದಾಯವನ್ನು ಓಲೈಸಲು ಹವಣಿಸುತ್ತಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದ ಬಿಲ್ಲವರು ನಿಧಾನವಾಗಿ ಬಿಜೆಪಿಯತ್ತ ಮುಖಮಾಡಿದರು. ಇದೀಗ ಅವರನ್ನು ಮತ್ತೆ ಪಕ್ಷದ ತೆಕ್ಕೆಗೆ ತರುವಲ್ಲಿ ಶ್ರಮಿಸುತ್ತಿದೆ. ಜನಪ್ರಿಯ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿಯೂ ಆಗಿರುವ ಪದ್ಮರಾಜ್ ಅವರು ಸಮುದಾಯವನ್ನು ಒಲಿಸಿಕೊಳ್ಳಬಹುದು ಎಂಬುದು ಪಕ್ಷದ ಆಶಯ. ಅಲ್ಲದೇ ಹಿಂದುತ್ವದ ಬಗ್ಗೆ ನನಗೆ ವಿರೋಧವಿಲ್ಲ ಎನ್ನುವ ಮೂಲಕವೇ ಬಿಜೆಪಿ ಮತದಾರರನ್ನು ಸೆಳೆಯುತ್ತಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಐದು ಭರವಸೆಗಳು ಮತ್ತು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳ ಮೇಲೆ ಕಾಂಗ್ರೆಸ್ ಹೆಚ್ಚು ಅವಲಂಬಿತವಾಗಿದೆ. ಪುರುಷ ಮತದಾರರಿಗೆ ಹೋಲಿಸಿದರೆ ಕ್ಷೇತ್ರದಲ್ಲಿ 44,000ಕ್ಕೂ ಹೆಚ್ಚು ಮಹಿಳಾ ಮತದಾರರು ಇದ್ದಾರೆ. ತನ್ನ ಖಾತರಿಗಳೇ ಮಹಿಳಾ ಮತದಾರರನ್ನು ಸೆಳೆಯುತ್ತವೆ ಎಂದು ಕಾಂಗ್ರೆಸ್ ಭಾವಿಸಿದೆ. ಕಟೀಲ್ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ 1 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿಯಾಗಿದೆ ಎಂಬುದನ್ನು ಪಕ್ಷವು ಸುಳ್ಳು ಎಂದು ಬಣ್ಣಿಸಿದೆ. ಅವರು ನಿಜವಾಗಿಯೂ ಅಭಿವೃದ್ಧಿ ಮಾಡಿದ್ದರೆ, ಮರು ಸ್ಪರ್ಧಿಸಲು ಅವರಿಗೆ ಏಕೆ ಟಿಕೆಟ್ ನಿರಾಕರಿಸಲಾಯಿತು ಎಂದು ಪ್ರಶ್ನಿಸಿದೆ. ಅಲ್ಲದೆ, ಈ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಪೂರ್ಣ ಕಾಮಗಾರಿಯನ್ನು ಸಹ ಜನರ ಮುಂದಿಟ್ಟಿದೆ.

SCROLL FOR NEXT