ಗೀತಾ ಶಿವರಾಜ್'ಕುಮಾರ್ 
ರಾಜಕೀಯ

ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ: ಗೀತಾ ಶಿವರಾಜ್'ಕುಮಾರ್ (ಸಂದರ್ಶನ)

Manjula VN

ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೀತಾ ಶಿವರಾಜಕುಮಾರ್ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದು, ಬಿಜೆಪಿಯ ಬಿವೈ ರಾಘವೇಂದ್ರ ವಿರುದ್ಧ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಈ ನಡುವೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಗೀತಾ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

ಪ್ರಚಾರ ಹೇಗೆ ನಡೆಯುತ್ತಿದೆ?

ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಾಕಷ್ಟು ಪ್ರೀತಿಯನ್ನು ತೋರಿಸುತ್ತಿದ್ದಾರೆ. ಯಾವುದೇ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿಲ್ಲ. ಮಹಿಳೆಯರು ಮತ್ತು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಸಭೆಗಳಿಗೆ ಬರುತ್ತಿದ್ದಾರೆ. ದಿವಂಗತ ನನ್ನ ತಂದೆ ಬಂಗಾರಪ್ಪ ಅವರ ಅನುಪಸ್ಥಿತಿಯನ್ನು ಎಲ್ಲರೂ ನೆನೆಯುತ್ತಿದ್ದಾರೆ.

ತಮ್ಮ ನೆಚ್ಚಿನ ನಟರನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವ ಸಾಧ್ಯತೆಗಳಿವೆ. ಇದು ಮತವಾಗಿ ಬದಲಾಗುತ್ತದೆ ಎಂದು ನೀವು ನಂಬುತ್ತೀರಾ?

2014ರ ಲೋಕಸಭಾ ಚುನಾವಣೆಯಲ್ಲಾದ ನನ್ನ ಹಿಂದಿನ ಅನುಭವದಂತೆ ಇದು ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ನಟರ ಪ್ರಚಾರ ನನಗೆ ಸಹಾಯ ಮಾಡುವ ಸಾಧ್ಯತೆಯಿದೆ.

2014ರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಂದ ನೀವು ಸೋಲು ಕಂಡಿದ್ದಿರಿ. 2018ರ ಉಪಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಸಹೋದರ ಮಧು ಬಂಗಾರಪ್ಪ ಅವರನ್ನು ಬಿಜೆಪಿಯ ರಾಘವೇಂದ್ರ ಅವರು ಸೋಲಿಸಿದ್ದರು...?

ರಾಘವೇಂದ್ರ ಅವರ ಗೆಲುವಿನ ಓಟ ಈ ಬಾರಿ ಕೊನೆಗೊಳ್ಳಲಿದೆ ಎಂಬುದು ನನ್ನ ನಂಬಿಕೆ.

ಸಂಸದರಾಗಿ ಆಯ್ಕೆಯಾದ ನಂತರ ನೀವು ಯಾವ ವಿಷಯಗಳಿಗೆ ಆದ್ಯತೆ ನೀಡುತ್ತೀರಿ?

ನನ್ನ ಸಹೋದರ ಮತ್ತು ಸ್ಥಳೀಯ ಶಾಸಕರು ಹಲವಾರು ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಸಂಂಸದೆಯಾದ ಬಳಿಕ ನನ್ನ ಮೊದಲ ಆದ್ಯತೆ ನೀರಿನ ಕೊರತೆ ನೀಗಿಸುವುದಾಗಿದೆ. ಸ್ಥಳೀಯವಾಗಿ ನಿಯಮಿತ ಬಸ್ ಸಂಪರ್ಕದ ಕೊರತೆಯಿಂದಾಗಿ ಚಿಕ್ಕ ಮಕ್ಕಳನ್ನು ಸಂಬಂಧಿಕರ ಮನೆ ಅಥವಾ ಹಾಸ್ಟೆಲ್‌ಗಳಿಗೆ ಓದಲು ಕಳುಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಸ್ತೆ ಸುಧಾರಣೆಯ ಉಪಕ್ರಮಗಳ ಜೊತೆಗೆ ಈ ಸಮಸ್ಯೆಯನ್ನು ಪರಿಹರಿಸಲಾಗುವುದು. ದೂರದ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವುದು. ಅರ್ಹ ವ್ಯಕ್ತಿಗಳಿಗೆ ಹಕ್ಕುಪತ್ರಗಳನ್ನು ನೀಡುವುದು. ನನ್ನ ಸಹೋದರ ಮತ್ತು ಇತರ ಶಾಸಕರ ಸಹಕಾರದೊಂದಿಗೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವಿದೆ.

ಕಾಂಗ್ರೆಸ್ ಗ್ಯಾರಂಟಿ ಯೋಡನೆಗಳು ನಿಮಗೆ ಸಹಾಯ ಮಾಡುತ್ತವೆಯೇ?

ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಮಹತ್ತರ ಕೊಡುಗೆ ನೀಡುತ್ತವೆ ಎಂಬ ವಿಶ್ವಾಸ ನನಗಿದೆ. ಗ್ಯಾರಂಟಿ ಯೋಜನೆಗಳು ಶೇ.98 ಜನರನ್ನು ತಲುಪಿವೆ, ಉಳಿದ ಶೇ.2 ಅರ್ಹ ಜನರು ತಾಂತ್ರಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಫಲಾನುಭವಿಗಳು ನನ್ನ ಪರವಾಗಿ ಮತ ಚಲಾಯಿಸುವ ಸಾಧ್ಯತೆ ಇದೆ. ಮತದ ಮೂಲಕ ಜನರು ಪಕ್ಷಕ್ಕೆ ಧನ್ಯವಾದ ಹೇಳಲಿದ್ದಾರೆ.

ಒಂದೊಮ್ಮೆ ಗೆದ್ದರೆ ಜನರ ಸಂಪರ್ಕಕ್ಕೆ ಸಿಗದೆ ಬೆಂಗಳೂರಿಗೆ ಮರಳುತ್ತೀರ ಎಂಬ ಆರೋಪವಿದೆ. ಈ ಆರೋಪಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಕುಬಟೂರು ಮತ್ತು ಶಿವಮೊಗ್ಗ ನನ್ನ ಮನೆಗಳಿವೆ. ಇಲ್ಲ ಸಲ್ಲದ ಆರೋಪಗಳನ್ನು ಪ್ರಚಾರ ಮಾಡುವ ಬದಲು ಬಿಜೆಪಿ ನಾಯಕರು ಪ್ರಬುದ್ಧತೆ ಪ್ರದರ್ಶಿಸಬೇಕು. ರೈತರ ಸಮಸ್ಯೆಗಳು ಮತ್ತು ಹಿಂದುಳಿದವರ ಸಂಕಷ್ಟದ ಬಗ್ಗೆ ಬಿಜೆಪಿ ಮಾತನಾಡಬೇಕು. ಕ್ಷೇತ್ರ ಜನರೊಂದಿಗೆ ಇರುತ್ತೇನೆ. ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆಂಬ ಭರವಸೆಯನ್ನು ನಾನು ನಿಮಗೆ ನೀಡುತ್ತಿದ್ದೇನೆ. ನಾನು ಎಂದಿಗೂ ನನ್ನ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ, ಶಕ್ತಿಧಾಮ ಅನಾಥಾಶ್ರಮಕ್ಕೆ ವಾರಕ್ಕೆ ಎರಡು ಬಾರಿ ಭೇಟಿ ನೀಡುವುದು ಇದಕ್ಕೆ ಸಾಕ್ಷಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

SCROLL FOR NEXT